ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಮುಂಬೈನಲ್ಲಿ ಬಿಜೆಪಿಯವರು 10 ಸಾವಿರ ಲಡ್ಡು ತಯಾರಿ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ 350ಕ್ಕೂ ಹೆಚ್ಚು ಸ್ಥಾನ ಗೆದ್ದು ಮೂರನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಈ ಸಂಬಂಧ ಬಿಜೆಪಿ ಮಾಜಿ ಶಾಸಕ ಅತುಲ್ ಶಾ ಅವರು ಪ್ರತಿಕ್ರಿಯಿಸಿ, ಪ್ರತಿಯೊಂದು ಗೆಲುವನ್ನು, ಸಂತೋಷವನ್ನು ಸಿಹಿ ಹಂಚಿ ಸಂಭ್ರಮಿಸುವುದು ನಮ್ಮ ಸಂಸ್ಕೃತಿಯಾಗಿದೆ. ಪ್ರಧಾನಿ ಮೋದಿ ಅವರು ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ. ಹಾಗಾಗಿ ಈ ವಿಜಯೋತ್ಸವವನ್ನು ಜನರಿಗೆ ಲಡ್ಡು ಹಂಚುವ ಮೂಲಕ ಆಚರಿಸುತ್ತೇವೆ ಎಂದು ಹೇಳಿದ್ದಾರೆ.

ನಾವು ಲಡ್ಡುಗಳನ್ನು ವಿತರಿಸುವ ಸಮಯದಲ್ಲಿ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್, ಟೀಸ್ರಿ ಬಾರ್ ಮೋದಿ ಸರ್ಕಾರ್’ ಎಂದು ಮುದ್ರಿಸಲಾಗಿದೆ. ನಾವು ಇಲ್ಲಿ 10,000 ಲಡ್ಡುಗಳನ್ನು ತಯಾರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿವಿಧ ಪಕ್ಷದ ನಾಯಕರು ಕೂಡ ಲಡ್ಡುಗಳನ್ನು ತಯಾರಿಸಲು ಆರ್ಡರ್‌ ಕೊಟ್ಟಿದ್ದಾರೆ. ಈ ಮೂಲಕ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ.

ಆಗ್ರಾ ಬ್ರಿಜ್ ರಸಾಯನಂ ಮಿಷ್ಠನ್ ಭಂಡಾರ್ ಮಾಲೀಕ ಉಮೇಶ್ ಗುಪ್ತಾ ಮಾತನಾಡಿ, ತಮ್ಮ ಅಭ್ಯರ್ಥಿಯ ಗೆಲುವು ಖಚಿತವಾಗಿರುವ ಪಕ್ಷಗಳಿಂದ ನಾವು ಲಡ್ಡುಗಳ ಆರ್ಡರ್ ಪಡೆಯುತ್ತಿದ್ದೇವೆ. ಫಲಿತಾಂಶ ದಿನದ ಸಂಭ್ರಮಕ್ಕಾಗಿ ನಾವು 11 ವಿವಿಧ ರೀತಿಯ ಲಡ್ಡುಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.