ಜೋಧ್ಪುರ: ಸ್ಮಶಾನದ ಗೇಟ್ ನಿರ್ಮಾಣ ವಿಚಾರಕ್ಕೆ ಎರಡು ಕೋಮುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ರಾಜಸ್ಥಾನದ ಜೋಧ್ಪುರದ ಸೂರ್ ಸಾಗರ್ ಪ್ರದೇಶದಲ್ಲಿರುವ ರಾಜಗ್ರಾಮ್ ಸರ್ಕಲ್ ಸಮೀಪದಲ್ಲಿ ನಡೆದಿದೆ.
ಈದ್ಗಾ ಮಸೀದಿಯ ಹಿಂದೆ ನಿರ್ಮಾಣ ಹಂತದಲ್ಲಿರುವ ಗೋಡೆ ಮತ್ತು ಗೇಟ್ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಭಾರೀ ಗಲಾಟೆ ನಡೆದಿತ್ತು. ಘಟನೆಯಲ್ಲಿ ಪೊಲೀಸರು ಸೇರಿದಂತೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಗಲಾಟೆ ಬಗ್ಗೆ ವರದಿಯಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಎರಡೂ ದುಷ್ಕರ್ಮಿಗಳ ತಂಡ ಪರಸ್ಪರ ಕಲ್ಲು ತೂರಾಟ ನಡೆಸಿದ್ದರು.
ಈ ವೇಳೆ ಅಂಗಡಿ, ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಪೊಲೀಸರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಇನ್ನು ಪೊಲೀಸರು ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಕಡೆಗಳಿಂದ ದೂರು ದಾಖಲಾಗಿದ್ದು, ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.

