ಮುಂಬೈ: ಬಿಎಂಡಬ್ಲ್ಯು ಕಾರು ಗುದ್ದಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಹಾನಗರ ವರ್ಲಿ ಪ್ರದೇಶದಲ್ಲಿ ಜುಲೈ 7 ರಂದು ನಡೆದಿದ್ದು, ಸಾವಿಗೆ ಕಾರಣನಾದ ಆರೋಪಿ ಘಟನೆ ನಡೆದು ಮೂರು ದಿನಗಳ ಬಳಿಕ ಆತನನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಮಿಹಿರ್ ಶಾ ಘಟನೆ ನಡೆದ ಬಳಿಕದಿಂದ ತಲೆ ಮರೆಸಿಕೊಂಡಿದ್ದನು. ಮಂಗಳವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮದ್ಯಪಾನ ಮಾಡಿ ಕಾರು ಚಲಾಯಿಸಿ ತನ್ನ ಬಿಎಂಡಬ್ಲ್ಯೂ ಕಾರನ್ನು ಸ್ಕೂಟರ್ ಗೆ ಡಿಕ್ಕಿ ಹೊಡೆಸಿದ್ದ ಆತ ಮಹಿಳೆಯ ಸಾವಿಗೆ ಕಾರಣನಾಗಿದ್ದನು.

24 ವರ್ಷದ ಮಿಹಿರ್ ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ. ರಾಜೇಶ್ ಶಾ ಅವರನ್ನು ವರ್ಲಿ ಪೊಲೀಸರು ಬಂಧಿಸಿದ್ದರು ಆದರೆ ಸೋಮವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮಿಹಿರ್​ ಜುಲೈ 7 ರಂದು ಮುಂಜಾನೆ ವೇಳೆ ವರ್ಲಿಯ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಬಂದ ದಂಪತಿಗೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ಕಾವೇರಿ ನಖ್ವಾ ಎಂಬ ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಪ್ರದೀಪ್ ಗಾಯಗೊಂಡಿದ್ದಾರೆ.

ಬಿಎಂಡಬ್ಲ್ಯೂ ಕಾರನ್ನು ಮಿಹಿರ್ ಶಾ ಚಲಾಯಿಸುತ್ತಿದ್ದು, ಅವರ ಚಾಲಕ ರಾಜರ್ಷಿ ಬಿಡಾವತ್ ಅವರ ಪಕ್ಕದ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದರು. ನಂತರ ಕಾರನ್ನು ಬಾಂದ್ರಾ ಪೂರ್ವದ ಕಲಾ ನಗರದಲ್ಲಿ ಬಿಟ್ಟು ಹೋಗಿದ್ದರು. ಮಿಹಿರ್ ಶಾ ವಿರುದ್ಧ ಭಾರತೀಯ ನ್ಯಾಯ ಸಾಹಿತ್ಯದ ಸೆಕ್ಷನ್ 105  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184, 134 ಎ, 134 ಬಿ, 187 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ನಂತರ ರಾಜೇಶ್ ಶಾ ತನ್ನ ಮಗ ಮಿಹಿರ್ಗೆ ಕರೆ ಮಾಡಿ ಚಾಲಕನೊಂದಿಗೆ ಸ್ಥಳಗಳನ್ನು ಬದಲಾಯಿಸುವಂತೆ ಮಗನಿಗೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಗನನ್ನು ಉಳಿಸಲು ಚಾಲಕನ ಮೇಲೆ ಆರೋಪ ಹೊರಿಸುವುದು ರಾಜೇಶ್ ಶಾ ಅವರ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

https://x.com/HateDetectors/status/1809911814677008675?