ಆಯೋಧ್ಯೆ: ಲೋಕಸಭಾ ಚುನಾವಣೆ ಫಲಿತಾಂಶ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಪ್ರಮುಖವಾಗಿ ಬಿಜೆಪಿ 370 ಹಾಗೂ ಎನ್‌ಡಿಎ 400 ಗುರಿ ಇಟ್ಟುಕೊಂಡು ಅಖಾಡಕ್ಕಿಳಿದಿತ್ತು.

ಇದೀಗ ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದೆ. ಎನ್‌ಡಿಎ ಬಹುಮಹತ ಮುನ್ನಡೆ ಕಾಯ್ದುಕೊಂಡರೂ, ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ ನೀಡುತ್ತಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಮಹತ್ತರ ಬದಲಾವಣೆಯಾದರೂ ಅಚ್ಚರಿಯಿಲ್ಲ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.

ಅದರಲ್ಲೂ ಶ್ರೀರಾಮ ಮಂದಿರ ಒಳಗೊಂಡ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿನತ್ತ ಮುಖಮಾಡಿದೆ. ಈ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿ ಅಭ್ಯರ್ಥಿ ಸಮಾಜವಾದಿ ಪಾರ್ಟಿಯ ಅವದೇಶ್ ಪ್ರಸಾದ್ ಭಾರಿ ಮುನ್ನಡೆ ಕಾಯ್ದುಕೊಂಡು ಗೆಲುವಿನ ಸನಿಹದಲ್ಲಿದ್ದಾರೆ.

ಫೈಜಾಬಾದ್ ಕ್ಷೇತ್ರದಲ್ಲಿ ಅವದೇಶ್ ಪ್ರಸಾದ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚುನಾವಣಾ ಆಯೋಗದ ಇತ್ತೀಚಿನ ವರದಿ ಪ್ರಕಾರ ಅವದೇಶ್ ಪ್ರಸಾದ್ 320488 ಮತಗಳನ್ನು ಪಡೆದಿದ್ದಾರೆ.

ಇನ್ನು ಕೆಲ ಸುತ್ತಿನ ಮತ ಎಣಿಕೆ ಬಾಕಿ ಇದೆ. ಇತ್ತ ಬಿಜೆಪಿ ಅಭ್ಯರ್ಥಿ ಲಲ್ಲೂ ಸಿಂಗ್ 305528 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಬಹುಜನ ಸಮಾಜವಾದಿ ಪಾರ್ಟಿಯ ಸಚ್ಚಿದಾನಂದ ಪಾಂಡೆ 22731 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಲಲ್ಲೂ ಸಿಂಗ್ ಫೈಜಾಬಾದ್‌ನ ಹಾಲಿ ಸಂಸದರಾಗಿದ್ದರೆ. ಆದರೆ ಶ್ರೀರಾಮ ಮಂದಿರ, ಆಯೋಧ್ಯೆ ಹೋರಾಟ, ಹಿಂದುತ್ವ ಯಾವುದೂ ಬಿಜೆಪಿ ಪರ ಕೆಲಸ ಮಾಡಿಲ್ಲ. ಆದರೆ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಎತ್ತಿದ ಪ್ರಮುಖ ಪ್ರಶ್ನೆಗಳು ಹಾಗೂ ಹೋರಾಟಕ್ಕೆ ಫಲ ಸಿಕ್ಕಿದೆ.