ಪಾಟ್ನಾ: ಭಾರತ್‌ ಬಂದ್‌ ವೇಳೆ ಮಕ್ಕಳಿದ್ದ ಶಾಲಾ ಬಸ್ಸಿಗೆ ಬೆಂಕಿ ಹಚ್ಚಲು ಮುಂದಾಗಿದ್ದ ಘಟನೆ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಡೆದಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಖಂಡಿಸಿ ಹಲವು ದಲಿತ ಸಂಘಟನೆಗಳು ಭಾರತ್‌ ಬಂದ್‌ಗೆ ಕರೆ ನೀಡಿದ್ದವು. ಬಂದ್‌ ವೇಳೆ ಬಿಹಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಮಕ್ಕಳಿದ್ದ ಶಾಲಾ ಬಸ್‌ ರಸ್ತೆಯಲ್ಲಿ ಬಂದಿದೆ.

ಶಾಲಾ ಬಸ್ಸನ್ನು ನೋಡಿದ ಕೂಡಲೇ ಸುತ್ತುವರೆದ ಪ್ರತಿಭಟನಾಕಾರರು ಚಕ್ರದ ಅಡಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಬೆಂಕಿಯನ್ನು ತೆಗೆದಿದ್ದಾರೆ. ಪ್ರತಿಭಟನಾಕಾರರು ಚಕ್ರದ ಅಡಿಗೆ ಬೆಂಕಿ ಹಾಕುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಡ್ರೋನ್ ಕ್ಯಾಮೆರಾಗಳ ಮೂಲಕ ತೊಂದರೆ ಸೃಷ್ಟಿಸುತ್ತಿದ್ದ ಕೆಲ ವ್ಯಕ್ತಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಬಸ್ಸಿಗೆ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಿಹಾರದಲ್ಲಿ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.