ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿರುವ ಗಾಂಧಿ ಸರೋವರದಲ್ಲಿ ಭಾನುವಾರ(ಜೂನ್ 30) ಹಿಮಕುಸಿತ ಸಂಭವಿಸಿದೆ. ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಡಾ.ವಿಶಾಖ ಅಶೋಕ್ ಭದನೆ ತಿಳಿಸಿದ್ದಾರೆ.
ದೇವಾಲಯದ ಹಿಂಭಾಗದಲ್ಲಿರುವ ಪರ್ವತದಲ್ಲಿ ಹಠಾತ್ ಹಿಮಕುಸಿತವಾಗಿದ್ದು, ಹಿಮವು ಹೆಚ್ಚಿನ ವೇಗದಲ್ಲಿ ಕೆಳಮುಖವಾಗಿ ಚಲಿಸುತ್ತಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ದೇವಸ್ಥಾನದ ಸುತ್ತ ನಿಂತಿದ್ದ ಜನರಲ್ಲಿ ಆತಂಕ ಸೃಷ್ಟಿಮಾಡಿತ್ತು.
ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ಆರಂಭವಾದಾಗಿನಿಂದಲೂ ಭಕ್ತರ ದಂಡೇ ಹರಿದು ಬಂದಿದೆ. ಜೂನ್ 6 ರವರೆಗೆ 7 ಲಕ್ಷಕ್ಕೂ ಹೆಚ್ಚು ಭಕ್ತರು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಮೇ 10 ರಿಂದ ಕೇವಲ 28 ದಿನಗಳಲ್ಲಿ ಒಟ್ಟು 7,10,698 ಯಾತ್ರಿಕರು ವಿಶ್ವವಿಖ್ಯಾತ 11ನೇ ಜ್ಯೋತಿರ್ಲಿಂಗ ಕೇದಾರನಾಥ ಧಾಮಕ್ಕೆ ಪ್ರಯಾಣಿಸಿದ್ದಾರೆ ಎಂದು ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ ಎಂದು ಪಿಟಿಐನಲ್ಲಿ ವರದಿಯಾಗಿದೆ.