ನವದೆಹಲಿ: ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ  ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದು ಚುನಾವಣೆ ಪ್ರಚಾರಕ್ಕಾಗಿ ನಿರೀಕ್ಷಣಾ ಜಾಮೀನು ಪಡೆದು 55 ದಿನಗಳ ನಂತರ ಮೇ 10 ರಂದು ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಹೊರ ಬಂದಿದ್ದರು.

ಇದೀಗ 21 ದಿನಗಳ ಮಧ್ಯಂತರ ಜಾಮೀನಿನ ಬಳಿಕ ಕೇಜ್ರಿವಾಲ್‌ ಅವರು ನಿನ್ನೆ ತಿಹಾರ್‌ ಜೈಲಿಗೆ ಶರಣಾಗಿದ್ದಾರೆ. ಕೇಜ್ರಿವಾಲ್ ಅವರು ಜೈಲಿಗೆ ಶರಣಾಗುತ್ತಿದ್ದಂತೆಯೇ ಅವರನ್ನು ವರ್ಚುವಲ್‌ ಕಾನ್ಫರೆನ್ಸ್ ಮೂಲಕ ಜಡ್ಜ್ ಸಂಜೀವ್ ಅಗರ್ವಾಲ್ ಮುಂದೆ ಹಾಜರುಪಡಿಸಲಾಯಿತು.

ಜಾರಿ ನಿರ್ದೇಶನಾಲಯವು ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಕೇಜ್ರಿವಾಲ್‌ ಪರ ವಕೀಲರಾದ ರಿಷಿಕೇಶ್ ಕುಮಾರ್ ಮತ್ತು ವಿವೇಕ್ ಜೈನ್ ಅವರು ಅರ್ಜಿಯನ್ನು ವಿರೋಧಿಸಿದರು. ಪ್ರಕರಣದಲ್ಲಿ ಅವರ ಬಂಧನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ಹೇಳಿದರು.

ಇದೀಗ  ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಅವರನ್ನು ಜೂನ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.