ಭೂಕುಸಿತದಿಂದ ಕೊಚ್ಚಿ ಹೋಗಿರುವ ವಯನಾಡಿನ ಮುಂಡಕೈಗೆ ತೆರಳಲು ಭಾರತೀಯ ಸೇನೆ ಬೈಲಿ ಸೇತುವೆಯನ್ನು ಸಂಪೂರ್ಣ ಸಿದ್ಧಪಡಿಸಿದೆ. ಬುಧವಾರ ಆರಂಭವಾದ ನಿರ್ಮಾಣವು ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಹಗಲಿರುಳು ಶ್ರಮಿಸಿದ ಬಳಿಕ ಇಂದು (ಗುರುವಾರ) ಸಂಜೆ 5.50ರ ಸುಮಾರಿಗೆ ಸಂಪೂರ್ಣ ಸಿದ್ಧಗೊಂಡ ಸೇತುವೆಯ ಮೂಲಕ ಮೊದಲ ವಾಹನ ಹಾದು ಹೋಗಿದೆ.

ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳಿಗೆ ಒಂದು ದೊಡ್ಡ ಪರಿಹಾರವಾಗಿ ಸೇತುವೆಯು ತೆರೆದಿರುತ್ತದೆ. ದುರಂತದಲ್ಲಿ ಅಳಿದುಳಿದ ಮುಂಡಕೈಯಲ್ಲಿ ಅವಶೇಷಗಳ ಪತ್ತೆ, ಮನುಷ್ಯ, ಪ್ರಾಣಿಗಳ ರಕ್ಷಣೆಗೆ ಬೈಲಿ ಸೇತುವೆ ಹೆಚ್ಚಿನ ಸಹಕಾರಿಯಾಗಲಿದೆ. ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (MEG) ನೇತೃತ್ವದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ.

ಸೇತುವೆಯು ಮುಂಡಕೈ ಮತ್ತು ಚೂರಲ್ಮಲವನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಸೇನೆ ನಿರ್ಮಿಸುತ್ತಿರುವ ಬೈಲಿ ಸೇತುವೆ ಒಂದು ಬಾರಿಗೆ 24 ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಿಟಾಚಿ ಸೇರಿದಂತೆ ದೊಡ್ಡ ರಕ್ಷಣಾ ಸಾಧನಗಳನ್ನು ಬೈಲಿ ಸೇತುವೆಯ ಮೂಲಕ ಮುಂಡಕೈಗೆ ಸಾಗಿಸಬಹುದು.

ಭಾರತೀಯ ವಾಯುಪಡೆಯ ಹೆಮ್ಮೆಯ ಗ್ಲೋಬ್‌ಮಾಸ್ಟರ್‌ನಲ್ಲಿ ಸೇತುವೆಯನ್ನು ನಿರ್ಮಿಸಲು ದೆಹಲಿಯಿಂದ ವಸ್ತುಗಳನ್ನು ತರಲಾಯಿತು. ಕಣ್ಣೂರು ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ 17 ಲಾರಿಗಳಲ್ಲಿ ಇದನ್ನು ವಯನಾಡಿಗೆ ತರಲಾಯಿತು.