ಬಿಹಾರ: ನೂತನ ಕಾಂಗ್ರೆಸ್​ ಸಂಸದ ಪಪ್ಪು ಯಾದವ್ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಉದ್ಯಮಿಯೊಬ್ಬರು ತಮ್ಮಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಪ್ರಕರಣ ದಾಖಲಾಗಿದೆ.

ಪೂರ್ಣಿಯಾ ಜಿಲ್ಲೆಯ ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, ದೂರುದಾರರು ಅವರ ಕ್ಷೇತ್ರದಲ್ಲಿ ಫರ್ನಿಶಿಂಗ್​ ವ್ಯವಹಾರ ನಡೆಸುತ್ತಿದ್ದು, ಮತ ಎಣಿಕೆ ದಿನದಂದು ಉದ್ಯಮಿ ಬಳಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

ಈ ಮೊದಲು 2021 ಹಾಗೂ 2023ರಲ್ಲಿ ಕೂಡ ಇದೇ ರೀತಿಯ ಬೇಡಿಕೆ ಇಟ್ಟಿದ್ದರು, ತಮಗೆ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದರು. ಮುಂದಿನ ಐದು ವರ್ಷ ಇದೇ ಸಂಸದರೊಂದಿಗೆ ವ್ಯವಹರಿಸಬೇಕಾಗುತ್ತದೆ ಎಚ್ಚರವಿರಲಿ ಎಂದು ಬೆದರಿಕೆ ಹಾಕಿದ್ದರು.

ದೂರಿನ ಆಧಾರದ ಮೇಲೆ ಸಂಸದ ಮತ್ತು ಅವರ ಆಪ್ತ ಅಮಿತ್ ಯಾದವ್ ವಿರುದ್ಧ ಮೊಫುಸಿಲ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಪಪ್ಪು ಯಾದವ್ ಮಾತನಾಡಿ, ತಾನು ರಾಜಕೀಯದಲ್ಲಿ ಬೆಳೆಯುತ್ತಿದ್ದೇನೆ ಎನ್ನುವ ಹೊಟ್ಟೆಕಿಚ್ಚಿನಿಂದ ಕೆಲವರು ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.