ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಸೇನೆಯ ವಾಹನವೊಂದು ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರೆ, ನಾಲ್ವರು ಸೈನಿಕರು ಗಾಯಗೊಂಡಿರುವ ಘಟನೆ ರಾಜೌರಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ನೌಶೇರಾ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಭವಾನಿ ಗ್ರಾಮದ ಮೂಲಕ ಸೇನಾ ವಾಹನವು ಗುರುವಾರ ಸಂಜೆ ತೆರಳುತ್ತಿತ್ತು. ವಾಹದಲ್ಲಿ ಐವರು ಯೋಧರು ಇದ್ದರು. ಇದೇ ವೇಳೆ, ವಾಹನವು ಚಾಲಕನ ನಿಯಂತ್ರಣ ತಪ್ಪಿದ್ದು, ಕಂದಕಕ್ಕೆ ಉರುಳಿದೆ.
ದುರಂತ ಸಂಭವಿಸುತ್ತಲೇ ಐವರೂ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಒಬ್ಬ ಯೋಧ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

