ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಳಪೆ ಪ್ರದರ್ಶನಕ್ಕೆ ಅಲ್ಪಸಂಖ್ಯಾತರ ಬೆಂಬಲದ ಕೊರತೆಯೇ ಪ್ರಮುಖ ಕಾರಣ. ಹೀಗಾಗಿ ಅಲ್ಪಸಂಖ್ಯಾತ ಮೋರ್ಚಾವನ್ನು ರದ್ದುಗೊಳಿಸಬೇಕೆಂದು ಕರೆ ನೀಡುವ ಮೂಲಕ ಹಿರಿಯ ಬಿಜೆಪಿ ನಾಯಕ ಸುವೆಂದು ಅಧಿಕಾರಿ ವಿವಾದ ಸೃಷ್ಟಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಅಲ್ಪ ಸಂಖ್ಯಾತ ಮೋರ್ಚಾವನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದಾರೆ.

ನಮ್ಮ ಪಕ್ಷದ ಮೂಲ ಗುರಿ ಸಬ್ಕಾ ಸಾಥ್‌ ಸಬ್ಕಾ ವಿಕಾಸ್‌. ನಾನು ರಾಷ್ಟ್ರೀಯವಾದಿ ಮುಸ್ಲಿಮರ ಜೊತೆಗೂ ಮಾತನಾಡಿದ್ದೇನೆ. ಇನ್ನು ಮುಂದೆ ನಮ್ಮ ಪಕ್ಷದ ಗುರಿ ನಮ್ಮ ಜೊತೆ ಯಾರು ಇರುತ್ತಾರೋ ನಾವು ಅವರ ಜೊತೆ ಇರುತ್ತೇವೆ ಎಂಬುದಾಗಿ ಬದಲಾಗಬೇಕು. ಇನ್ನು ಮುಂದೆ ಅಲ್ಪ ಸಂಖ್ಯಾತ ಮೋರ್ಚಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಸುವೆಂಧು ಅಧಿಕಾರಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಪಕ್ಷ ಎಂದು ಕಿಡಿಕಾರಿವೆ. ಇದರ ಬೆನ್ನಲ್ಲೇ ಸುವೆಂಧು ಅಧಿಕಾರಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ನನ್ನ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಟ್ಟು ನೋಡಲಾಗುತ್ತಿದೆ. ಅದು ಅಲ್ಲದೇ ತಪ್ಪಾಗಿ ಅರ್ಥೈಸಲಾಗುತ್ತಿದೆ. ರಾಷ್ಟ್ರೀಯವಾದಿಗಳು ಈ ರಾಷ್ಟ್ರ ಮತ್ತು ಬಂಗಾಳದ ಪರವಾಗಿ ನಿಲ್ಲುತ್ತಾರೆ ಮತ್ತು ನಾವು ಅವರೊಂದಿಗೆ ಇರಬೇಕು ಎಂದು ನಾನು ಸ್ಪಷ್ಟಪಡಿಸುತ್ತೇನೆ.

ನಮ್ಮೊಂದಿಗೆ ನಿಲ್ಲದವರು ರಾಷ್ಟ್ರ ಮತ್ತು ಬಂಗಾಳದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಮಮತಾ ಬ್ಯಾನರ್ಜಿಯವರಂತೆ ನಾವು ಜನರನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಭಜಿಸಬಾರದು. ಎಲ್ಲರನ್ನೂ ಭಾರತೀಯರು ಎಂಬಂತೆ ಕಾಣಬೇಕು. ಪ್ರಧಾನಿ ನರೇಂದ್ರ ಮೋದಿ ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌ ಮತ್ತು ಸಬ್ಕಾ ಪ್ರಯಾಸ್‌ ಎಂಬುದಕ್ಕೆ ಕರೆ ಕೊಟ್ಟಿದ್ದಾರೆ. ಅದರಂತೆ ಎಲ್ಲರೂ ನಡೆಕೊಳ್ಳಬೇಕಿದೆ ಎಂದು ಹೇಳಿದ್ದಾರೆ.