ಮುಂಬೈ: ಛತ್ತೀಸ್ಗಢ-ಮಹಾರಾಷ್ಟ್ರ ಗಡಿಯಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ 12 ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ನಕ್ಸಲರು ಅಡಗಿರುವ ಪ್ರದೇಶದ ಕುರಿತು ಮಾಹಿತಿ ಪಡೆದಿದ್ದ 200 ಕಮಾಂಡೋಗಳು ಹೆಲಿಕಾಪ್ಟರ್ ಮೂಲಕ ದಟ್ಟ ಅರಣ್ಯ ತಲುಪಿದ್ದರು. ಛತ್ತೀಸ್ಗಢದ ಗಡಿ ಸಮೀಪದ ವಂಡೋಲಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಎನ್ಕೌಂಟರ್ ನಡೆದಿದ್ದು, ಆರು ಗಂಟೆಗಳಿಗೂ ಹೆಚ್ಚು ಕಾಲ ಎನ್ಕೌಂಟರ್ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.
ಸುಮಾರು 12-15 ಮಾವೋವಾದಿಗಳು ಬೀಡು ಬಿಟ್ಟಿದ್ದಾರೆ ಎಂದು ಪೊಲೀಸರಿಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಲಭಿಸಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ CRACK C-60 ಕಮಾಂಡೋಗಳ ಏಳು ತಂಡಗಳು ಅಲ್ಲಿಗೆ ತಲುಪಿದವು. ಇದರ ಬೆನ್ನಲ್ಲೇ ಭಾರೀ ಗುಂಡಿನ ಚಕಮಕಿ ಆರಂಭವಾಯಿತು. ಸಂಜೆಯವರೆಗೂ ಪಾಖಂಜೂರಿನ ಅರಣ್ಯದಲ್ಲಿ ಗುಂಡಿನ ಚಕಮಕಿ ಮುಂದುವರಿದಿತ್ತು.
ಎನ್ಕೌಂಟರ್ ನಂತರ, ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ನಡೆಸಿತು ಮತ್ತು 12 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಂಡಿದೆ. ಪೊಲೀಸರು ಮೂರು ಎಕೆ-47, ಎರಡು INSAS ರೈಫಲ್ಗಳು, ಒಂದು ಕಾರ್ಬೈನ್ ಮತ್ತು ಒಂದು SLR ಸೇರಿದಂತೆ ಏಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಲ್ಲಲ್ಪಟ್ಟ ಮಾವೋವಾದಿಗಳಲ್ಲಿ ಪೊಲೀಸರು ಹುಡುಕುತ್ತಿದ್ದ ಡಿವಿಸಿಎಂ ಲಕ್ಷ್ಮಣ್ ಅತ್ರಾಮ್ ಅಲಿಯಾಸ್ ವಿಶಾಲ್ ಅತ್ರಮ್ ಸೇರಿದ್ದಾರೆ, ಅವರು ತಿಪಗಡ ದಳದ ಉಸ್ತುವಾರಿ ವಹಿಸಿದ್ದರು. ಇನ್ನು ಯಶಸ್ವಿ ಕಾರ್ಯಾಚರಣೆಗಾಗಿ ಸಿ-60 ಕಮಾಂಡೋಗಳು ಮತ್ತು ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂಪಾಯಿ ನಗದು ಬಹುಮಾನವನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ.

