ದುಬೈ : ಕನ್ನಡ ಮಿತ್ರರು ಯುಎಈ ಇದರ ಸಹಯೋಗದೊಂದಿಗೆ, ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಿತಿಯ ’34ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ’ ಆಗಸ್ಟ್ 27ರಂದು ದುಬೈನ ಫಾರ್ಚ್ಯೂನ್ ಗ್ರ್ಯಾಂಡ್ ಹೋಟೇಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಸುಮಾರು 34 ಕಲಾವಿದರ ತಂಡ ಕನ್ನಡ ನಾಡಿನ ಸಂಸ್ಕೃತಿಯ ಸೊಬಗನ್ನು ಮರುಭೂಮಿ ನಾಡಾದ ದುಬೈನಲ್ಲಿ ಪಸರಿಸಿ ಅನಿವಾಸಿ ಕನ್ನಡಿಗರ ಮನಗೆದ್ದರು. ತನ್ನ ಜಾನಪದ ಹಾಡಿನ ಮೂಲಕ ಪ್ರಸಿದ್ಧ ಗಾಯಕಿ ಸವಿತಕ್ಕ ಗಮನಸೆಳೆದರೆ, ಮೆಹಬೂಬ್ ಕಿಲ್ಲೇದಾರ್ ಹಾಗೂ ಮರಿಯಪ್ಪ ಚಾಮಲಪೂರರ ಜಾನಪದದ ಸೊಗಡಿಗೆ ಪ್ರೇಕ್ಷಕರು ತಲೆದೂಗಿದರು. ಶೈಲಜಾ ಕುಮಾರ್ ಹಾಗೂ ಜಯಶ್ರೀ ಹೆಗ್ಡೆ ಶಿಷ್ಯವೃಂದದ ಭರತನಾಟ್ಯ, ಜಾನಪದ ನೃತ್ಯ ಪ್ರೇಕ್ಷಕರನ್ನು ಸ್ತಂಭೀಭೂತಗೊಳಿಸಿತು. ಹಿರಿಯ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿಯವರ ಸರಳ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ವಹಿಸಿದ್ದರು. ಕನ್ನಡ ಮಿತ್ರರು ಯುಎಈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಐಸಿಎಫ್ಸಿ ಅಧ್ಯಕ್ಷ ಮಂಜುನಾಥ ಸಾಗರ್, ಕನ್ನಡ ಸಂಘ ಮಸ್ಕತ್ ಅಧ್ಯಕ್ಷ ಪ್ರಸಾದ್ ಕೂರ್ಗ್, ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಅಧ್ಯಕ್ಷರಾದ ಹಿದಾಯತ್ ಅಡ್ಡೂರ್, ಕನ್ನಡಿಗರು ದುಬೈ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಚಲನಚಿತ್ರ ನಿರ್ಮಾಪಕ ಈಶ್ವರ್ ದಾಸ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಕನ್ನಡ ಸಂಸ್ಕೃತಿ, ಭಾಷೆ ಪರ, ಅನಿವಾಸಿ ಕನ್ನಡಿಗರ ಪರ ಸೇವೆಗೈದ , ಹಿದಾಯತ್ ಅಡ್ಡೂರ್, ಸರ್ವೋತ್ತಮ ಶೆಟ್ಟಿ, ಪ್ರಭಾ ಸುವರ್ಣ, ವೀರೇಂದ್ರ ಬಾಬು, ಕೃಷ್ಣಪ್ಪ ಗೌಡ, ಶಾಲಿನಿ, ರಮಾನಂದ ಪ್ರಭು, ಪ್ರಹ್ಲಾದ ಬಸಪ್ಪ, ಈಶ್ವರ್ ದಾಸ್ ಶೆಟ್ಟಿ ಹಾಗೂ ಇತರ ಗಣ್ಯರನ್ನು ಗೌರವಾಧಾರದಿಂದ ಸನ್ಮಾನಿಸಲಾಯಿತು.
Author: Shashidhar Nagarajappa