ಮುಂಬಯಿ: ಲಕ್ಷ್ಮೀನಾರಾಯಣರ ಜೋಡಿಯು ಯಾವತ್ತೂ ವಿಚ್ಛೇದನವಾಗದ ಜೋಡಿಯಾಗಿದ್ದು ಕೇವಲ ಲಕ್ಷ್ಮಿಯನ್ನು ಪೂಜಿಸಿದರೆ ಅದು ಫಲಪ್ರದವಾಗುವುದಿಲ್ಲ. ಅದುದರಿಂದ ಲಕ್ಷ್ಮೀನಾರಾಯಣರನ್ನು ಒಂದಾಗಿ ಪೂಜಿಸಿದರೆ ಅದರಿಂದ ಪೂರ್ಣ ಫಲ ಸಿಗುತ್ತದೆ. ವರಮಹಾಲಕ್ಷ್ಮಿ ಎಂದರೆ ವರನಿಂದ ಕೂಡಿದಂತ ಮಹಾಲಕ್ಷ್ಮಿ ಎಂದರ್ಥ ಎಂದು ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣ ಆಸ್ರಣ್ಣರು ನುಡಿದರು.
ಈಚೆಗೆ ಮಲಾಡ್ ಪೂರ್ವದ ಬಚ್ಚಾನಿ ನಗರ ಚಿಲ್ಡ್ರನ್ಸ್ ಅಕಾಡೆಮಿಯ ಸಭಾಗೃಹದಲ್ಲಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಹತ್ತನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಧಾರ್ಮಿಕ ಸಭೆಯಲ್ಲಿ ಭಕ್ತಾಭಿಮಾನಿಗಳಿಗೆ ಆಶೀರ್ವಚನ ನೀಡಿದರು.
ಸಭೆಗೆ ಗೌರವ ಅತಿಥಿಯಾಗಿ ಆಗಮಿಸಿದ ಉತ್ತರ ಮುಂಬಯಿ ಸಂಸದರಾದ ಗೋಪಾಲ್ ಶೆಟ್ಟಿ ಅವರು ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ತುಳು ಕನ್ನಡಿಗರನ್ನು ಒಂದುಗೂಡಿಸಿ ನಮ್ಮ ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ. ತುಳು ಕನ್ನಡಿಗರು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಂಬಾ ಅಭಿಮಾನವಾಗುತ್ತಿದೆ ಎಂದರು.
ನಗರದ ತುಂಗಾ ಹಾಸ್ಪಿಟಲ್ ಇದರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಅವರು ಮಾತನಾಡಿ ಜೀವನದಲ್ಲಿ ಎಲ್ಲರೂಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಕಾಳಜಿಯನ್ನು ವಹಿಸಿಕೊಳ್ಳಬೇಕು. ಇಂತಹ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳಿಗೆ ನಮ್ಮ ನಾಡಿನ ಧಾರ್ಮಿಕ ಆಚರಣೆ ಸಂಸ್ಕೃತಿ-ಕಲೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಂದು ಬೆಳಿಗ್ಗೆ ಸದಾನಂದ ಕೋಟ್ಯಾನ್ ಮತ್ತು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯ ಉದ್ಘಾಟನಾ ಸಮಾರಂಭ ನಡೆದಿದ್ದು ಮಲಾಡ್ ಕುರಾರ್ ವಿಲೇಜ್ ಶ್ರೀ ಶನೀಶ್ವರ ದೇವಸ್ಥಾನದ ವೇದಮೂರ್ತಿ ರಾಘವೇಂದ್ರ ತುಂಗ ಭಟ್, ಮಲಾಡ್ ಪೂರ್ವ ತಾನಾಜಿ ನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಘವೇಂದ್ರ ಭಟ್, ಸೂಡ, ಮಲಾಡ್ ಪೂರ್ವ ತತಾಸ್ತು ಪೌಂಡೇಶನ್ ನ ಅಧ್ಯಕ್ಷರಾದ ವೇದಮೂರ್ತಿ ಸತೀಶ್ ಭಟ್, ಮಲಾಡ್ ಪೂರ್ವ ಶಿವಭವಾನಿ ಶಂಕರ್ ದೇವಸ್ಥಾನದ ಸದಾಶಿವ ಆಚಾರ್ಯ, ಮಲಾಡ್ ಪೂರ್ವ ಕುರಾರ್ ಶ್ರೀ ಮೂಕಾಂಭಿಕ ದೇವಸ್ಥಾನದ ವೇದಾನಂದ ಸ್ವಾಮೀಜಿ, ಕುರಾರ್ ಶ್ರೀ ಮಹಾಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ರವಿ ಸ್ವಾಮೀಜಿ, ಇರಾನಿ ಚಾಲ್ ಶ್ರೀ ಶನೀಶ್ವರ ದೇವಸ್ಥಾನದ ಎಸ್. ಯು. ಬಂಗೇರ (ಭುವಾಜಿ),ಮಾಲಾಡ್ ಪೂರ್ವ ಗೋವಿಂದ ನಗರ ಶ್ರೀ ಅಂಬಿಕಾ ದೇವಸ್ಥಾನದ ಸಂತೋಷ್ ದೇವಾಡಿಗ ಉಪಸ್ಥಿತರಿದ್ದರು.