ಮುಂಬಯಿ: ಸಮಾಜದಲ್ಲಿನ ಜನಸಾಮಾನ್ಯರ ಸೇವೆ ಮಾಡುತ್ತಾ ಬಂದಿರುವ ಬಂಟರ ಸಂಘವು ಇಂದು ವಿಶ್ವದಲ್ಲೇ ಖ್ಯಾತಿಯನ್ನು ಪಡೆದಿದೆ. ಸಮಾಜದಲ್ಲಿನ ಶ್ರೀಮಂತರು ದಾನಿಗಳಾಗಿ ಸಹಕರಿಸಿ ಬಡವರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಮಾತ್ರವಲ್ಲದೆ, ದಾನಿಗಳಿಂದಾಗಿ ಸಂಘ ಹೆಚ್ಚಿನ ಅಭಿವೃದ್ದಿಯಾಗುತ್ತಿದೆ. ದಾನಿಗಳಿಂದ ಸಮಾಜದ ಪರಿವರ್ತನೆಗಳು ಕೂಡಾ ಸಾಧ್ಯ. ಮುಂಬಯಿ ಉಪನಗರಗಳಲ್ಲಿನ ಎಲ್ಲಾ ಪ್ರಾದೇಶಿಕ ಸಮಿತಿಗಳ ಸಹಕಾರದೊಂದಿಗೆ ಕಾಲೇಜನ್ನು ಸ್ಥಾಪಿಸುವ ಯೋಜನೆ ನಮ್ಮದಾಗಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಎಸ್, ಪಯ್ಯಡೆಯವರು ಅಭಿಪ್ರಾಯಪಟ್ಟರು.
ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ ಹಾಗೂ ದತ್ತು ಸ್ವೀಕಾರ ಕಾರ್ಯಕ್ರಮವು ಜೂ. 24 ಮೀರಾರೋಡ್ ಸೆಕ್ಟರ್ 10ರ ಸ್ವಾಮಿ ನಾರಾಯಣ ಮಂದಿರದಲ್ಲಿ ಸಭಾಗೃಹದಲ್ಲಿ ಜರಗಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ, ಆರ್ಥಿಕ ನೆರವು ವಿತರಣೆ ಹಾಗೂ ದತ್ತು ಸ್ವೀಕಾರ ದ ಬಳಿಕ ಮಾತನಾಡಿದ ಪದ್ಮನಾಭ ಎಸ್, ಪಯ್ಯಡೆಯವರು, ದಾನಿಗಳ ಸಹಕಾರದಿಂದ ಈ ಸಲ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡಲಾಯಿತು ಎಂದರು. ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ ಅವರು ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಮಾತನಾಡುತ್ತಾ ಮುಂದಿನ ವರ್ಷ ಪ್ರಥಮ ದರ್ಜೆಯಿಂದ ಹತ್ತನೆಯ ತರಗತಿ ತನಕ ಹೆಚ್ಚಿನ ಮಟ್ಟದಲ್ಲಿ ಶೈಕ್ಷಣಿಕ ನೆರವನ್ನು ನೀಡುವ ಉದ್ದೇಶ ನಮ್ಮದಾಗಿದ್ದು ಇಲ್ಲಿನ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರ ನಾಯಕತ್ವದಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು,
ಈ ಸಮಾರಂಭದಲ್ಲಿ ಮೀರಾ-ಭಾಯಂದರ್ ಪರಿಸರದ ಸುಮಾರು 623 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, 61 ವಿಧವೆಯರಿಗೆ ನೆರವು, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ತಂಡವು ಸಂಗ್ರಹಿಸಿದ ಹಣದಿಂದ 32 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಯಿತು. ಕೆಲವು ವಿಕಲಚೇತನರಿಗೆ ಆರ್ಥಿಕ ನೆರವು ನೀಡಲಾಯಿತು.
ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಗೌರವ ಪ್ರದಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಸಂಘದ ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ. ಪ್ರಭಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜಿನಿ ಎಸ್. ಹೆಗ್ಡೆ, ಪ್ರಾದೇಶಿಕ ಸಮಿತಿಯ ಸಂಚಾಲಕ ಅರುಣೋದಯ ರೈ, ಉಪ ಕಾರ್ಯಾಧ್ಯಕ್ಷರುಗಳಾದ ಎಲಿಯಾಳ ಉದಯ ಹೆಗ್ಡೆ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಾಪಾಡಿಗುತ್ತು, ಕೋಶಾಧಿಕಾರಿ ಉದಯ ಶೆಟ್ಟಿ, ಪೆಲತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕೆ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಯಿಪ್ರಸಾದ್ ಪೂಂಜಾ, ಜತೆ ಕಾರ್ಯಾದರ್ಶಿ ಶಂಕರ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ನಿಧಿ ಶೆಟ್ಟಿ, ಕೋಶಾಧಿಕಾರಿ ರಮೇಶ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಅಡ್ಯಾರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೀರಾರೋಡ್ ನ ಜನಪ್ರಿಯ ವೈದ್ಯ ಡಾ. ಭಾಸ್ಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಸ್ವಾಗತಿಸಿದರು. ಬಾಬಾ ಪ್ರಸಾದ್ ಅರಸ್ ಕಾರ್ಯಕ್ರಮವನ್ನು ನಿರೂಪಿಸಿದರು. ರವೀಂದ್ರ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು.
ವರದಿ: ಈಶ್ವರ ಎಂ. ಐಲ್
ಚಿತ್ರ: ದಿನೇಶ್ ಕುಲಾಲ್