ಪ್ರತಿಯೊಂದು ಅಡುಗೆಯಲ್ಲೂ ಕರಿಬೇವಿನ ಎಲೆ ಹಾಕಿಯೇ ಹಾಕುತ್ತೇವೆ. ಅದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದಲೂ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಗುಣಗಳಿದ್ದರೂ ಕೂಡ ಎಲೆ ಎಲ್ಲರಿಗೂ ಸೂಕ್ತವಲ್ಲ.
ಕರಿಬೇವಿನ ಸೊಪ್ಪು ಸ್ವಾಭಾವಿಕವಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಲಾಭಕರವಾದರೂ, ಈಗಾಗಲೇ ಶುಗರ್ ಮಟ್ಟ ಕಡಿಮೆ ಇರುವವರು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹೈಪೋಗ್ಲೈಸೀಮಿಯಾ ಅಪಾಯ ಹೆಚ್ಚುತ್ತದೆ. ಇದರಿಂದ ತಲೆ ಸುತ್ತುವುದು, ದೌರ್ಬಲ್ಯ ಕಾಣಿಸಿಕೊಳ್ಳಬಹುದು.
ಕೆಲವರಿಗೆ ಕೆಲವು ರೀತಿಯ ಸೊಪ್ಪು ಅಥವಾ ಮಸಾಲೆ ಸೇವನೆ ಮಾಡಿದಾಗ ಅಲರ್ಜಿ ಉಂಟಾಗುತ್ತದೆ. ಹಾಗೆಯೇ ಕರಿಬೇವಿನ ಎಲೆ ಕೆಲವರಿಗೆ ಆಗಿಬರುವುದಿಲ್ಲ. ಇದನ್ನು ತಿಂದ ನಂತರ ಚರ್ಮದಲ್ಲಿ ಉರಿ, ಊತ ಅಥವಾ ಉಸಿರಾಟ ಸಂಬಂಧಿ ತೊಂದರೆ ಕಂಡುಬರಬಹುದು. ಹಾಗಾದರೆ ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದು.
ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ದೇಹ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಕರಿಬೇವಿನ ಎಲೆಯ ರಸ ಅಥವಾ ಹೆಚ್ಚು ಪ್ರಮಾಣದಲ್ಲಿ ಕರಿಬೇವಿನ ಸೊಪ್ಪಿನ ಪುಡಿಯನ್ನು ಸೇವಿಸುವುದರಿಂದ ಕೆಲವರಿಗೆ ವಾಂತಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮಿತವಾಗಿ ಸೇವಿಸುವುದು ಉತ್ತಮ.
ಕರಿಬೇವಿನ ಸೊಪ್ಪು ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಸಹಾಯಕವಾದರೂ, ಅಲ್ಸರ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿರುವವರು ಹಸಿ ಎಲೆಯನ್ನು ನೇರವಾಗಿ ಜಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು.

