ಹಾಸನ: ಸಮಾಜಸೇವೆ, ಪರಿಸರ ಸಂರಕ್ಷಣೆ ಹಾಗೂ ಮಾನವೀಯತೆಯ ಸಂಕೇತವಾಗಿರುವ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ – ಇವರ ಹೆಸರನ್ನು ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಗೆ ಘೋಷಿಸಬೇಕು ಎಂಬುದು ಮಲ್ನಾಡು ರಕ್ಷಣಾ ಸೇನೆಯ ಗಟ್ಟಿಯಾದ ಧ್ವನಿಯಾಗಿದೆ
ನೂರಾರು ಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಜೀವಂತ ಮಾದರಿಯಾಗಿರುವ ತಿಮ್ಮಕ್ಕ ಅವರು, ಅನೇಕರಿಗೆ ಸ್ಫೂರ್ತಿಯಾಗಿರುವ ಅಸಾಮಾನ್ಯ ವ್ಯಕ್ತಿತ್ವ. “ಕೇವಲ ಸಂಪ್ರದಾಯಿಕ ವ್ಯಕ್ತಿಗಳಿಗೆ ಮಾತ್ರವಲ್ಲ, ಸಮಾಜಕ್ಕೆ ನಿಜವಾದ ಹಸಿರು ದಾರಿ ತೋರಿದವರಿಗೂ ದಸರಾ ವೇದಿಕೆಯಲ್ಲಿ ಗೌರವ ಸಿಗಬೇಕು” ಎಂಬ ಧ್ವನಿ ಮಲೆನಾಡು ಭಾಗದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಮಲ್ನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ,“ದಸರಾ ನಾಡಹಬ್ಬ, ಕನ್ನಡದ ಹಬ್ಬ. ಕನ್ನಡದ ತಾಯಿ ಭುವನೇಶ್ವರಿಯನ್ನು ತಿರಸ್ಕರಿಸಿ, ಕನ್ನಡದ ಸಂಸ್ಕೃತಿಗೆ ಅಸಮ್ಮಾನ ತೋರಿದವರಿಗಿಂತ ಕನ್ನಡದ ಮಣ್ಣಿಗೆ ಜೀವ ತುಂಬಿದ ತಿಮ್ಮಕ್ಕ ಅವರೇ ಈ ಗೌರವಕ್ಕೆ ಯೋಗ್ಯರು. ತಮ್ಮ ವಯಸ್ಸಿನ ಈ ಹಂತದಲ್ಲೂ ಸಮಾಜ ಸೇವೆಗೆ ತೊಡಗಿರುವ ತಿಮ್ಮಕ್ಕ ಅವರಿಗೆ ದಸರಾ ಉದ್ಘಾಟನೆ ಎಂಬ ಗೌರವ ಸಲ್ಲಿಸುವುದೇ ನಾಡಿನ ಸಾಂಸ್ಕೃತಿಕ ಪರಂಪರೆಗೆ ತಕ್ಕ ನಿರ್ಧಾರ” ಎಂದು ಮನವಿ ಮಾಡಿದರು.
ಇದೇ ವೇಳೆ ಹಾಸನ ಜಿಲ್ಲಾ ಮಲ್ನಾಡು ರಕ್ಷಣಾ ಸೇನೆಯ ಅಧ್ಯಕ್ಷ ದರ್ಶನ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, “ತಿಮ್ಮಕ್ಕ ಅವರು ಮರಗಳನ್ನು ಬೆಳೆಸಿದಷ್ಟೇ ಹೃದಯಗಳನ್ನು ಬೆಳೆಸಿದ್ದಾರೆ. ಪ್ರಕೃತಿಯನ್ನು ತಾಯಿಯಂತೆ ಆರಾಧಿಸಿದವರಿಗೆ ದಸರಾ ವೇದಿಕೆಯಲ್ಲಿ ಸನ್ಮಾನ ದೊರೆತರೆ ಅದು ನಿಜವಾದ ಕೃತಜ್ಞತೆ. ಜನಸಾಮಾನ್ಯರ ಮನಸ್ಸಿಗೆ ಹತ್ತಿರವಾದ ಇಂತಹ ವ್ಯಕ್ತಿಗಳಿಗೆ ಮಾತ್ರ ನಾಡಹಬ್ಬದ ಗೌರವ ಸಲ್ಲಿಸಬೇಕೆಂದು ನಮ್ಮ ಒತ್ತಾಯ” ಎಂದು ಅಭಿಪ್ರಾಯಪಟ್ಟರು.

