ಬೆಂಗಳೂರು: ಶಿವರಾಜ್ ಕುಮಾರ್ ಅವರ ‘ಘೋಸ್ಟ್’ ಸಿನಿಮಾಕ್ಕೆ ಅದ್ಬುತ ಪ್ರತಿಕ್ರಿಯೆ ದೊರೆಯುತ್ತಿದೆ. ‘ಘೋಸ್ಟ್’ ಜೊತೆಗೆ ಬಿಡುಗಡೆ ಆಗಿರುವ ‘ಲಿಯೋ’, ‘ಭಗವಂತ್ ಕೇಸರಿ’, ‘ಟೈಗರ್ ನಾಗೇಶ್ವರ ರಾವ್’ ಸಿನಿಮಾಗಳಿಗೆ ಹೆಚ್ಚಿನ ಶೋ ದೊರೆತಿದ್ದು ‘ಘೋಸ್ಟ್’ನ ಶೋಗಳ ಸಂಖ್ಯೆಯಲ್ಲಿ ಇಳಿಮುಖ ಆಗಿದೆ. ಮಲ್ಟಿಪ್ಲೆಕ್ಸ್ಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿವೆ ಎನ್ನಲಾಗುತ್ತಿದೆ.
ಮಲ್ಟಿಪ್ಲೆಕ್ಸ್ಗಳ ಈ ಪಕ್ಷಪಾತದ ಬಗ್ಗೆ ನಟ ಶಿವರಾಜ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆನ್ನಾಗಿ ಓಡುತ್ತಿರುವ ಸಿನಿಮಾಗಳಿಗೆ ಸಮಸ್ಯೆ ಮಾಡುವುದು ಸರಿಯಲ್ಲ. ಬೇರೆ ಸಿನಿಮಾಗಳಿಗೆ ಕಡಿಮೆ ಶೋ ಕೊಡಿ ಎಂಬುದು ನಮ್ಮ ವಾದವಲ್ಲ, ಆದರೆ ಚೆನ್ನಾಗಿ ಓಡುತ್ತಿರುವ ಸಿನಿಮಾಕ್ಕೆ ತೊಂದರೆ ಮಾಡಬೇಡಿ ಎಂಬುದಷ್ಟೆ ನಮ್ಮ ಬೇಡಿಕೆ.
ಸೌಂಡ್ ಕ್ಯಾಲಿಟಿ ಚೆನ್ನಾಗಿದೆ, ಸಿನಿಮಾ ನೋಡುವಾಗ ಪಾಪ್ಕಾರ್ನ್-ಪೆಪ್ಸಿ ಹಿಡಿದುಕೊಂಡು ಸಿನಿಮಾ ನೋಡುತ್ತಾರೆ ಎಂಬುದು ಬಿಟ್ಟರೆ, ಸಿಂಗಲ್ ಸ್ಕ್ರೀನ್ಗೂ ಮಲ್ಟಿಪ್ಲೆಕ್ಸ್ಗೂ ವ್ಯತ್ಯಾಸವೇನೂ ಇಲ್ಲ. ಹಾಗಾಗಿ ಮಲ್ಟಿಪ್ಲೆಕ್ಸ್ಗಳು ನೋಡಿಕೊಂಡು ವ್ಯವಹರಿಸಬೇಕು, ಪಿವಿಆರ್ಗೆ ಏನು ಕೊಂಬಿದ್ಯಾ? ಅವರಿಗೆ ಕೊಂಬು ಇದ್ದರೆ, ಅದನ್ನು ಒಳ್ಳೆಯದಕ್ಕೆ ಬಳಸಲಿ, ತಿವಿಯಲು ಬರುವುದು ಬೇಡ. ಅವರಿಗೆ ಯಾವ ರೀತಿ, ಯಾರು ಬುದ್ಧಿ ಕಲಿಸಬೇಕೊ ಅವರು ಕಲಿಸುತ್ತಾರೆ. ಈಗಾಗಲೇ ಬುದ್ಧಿ ಕಲಿತಂತಿದೆ ಎಂದು ಶಿವರಾಜ್ ಕುಮಾರ್ ಗುಡುಗಿದ್ದಾರೆ.