ಬೆಂಗಳೂರು: ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಒಂದೇ ವಾರಕ್ಕೆ ಸಿನಿಮಾ ಈ ಸಾಧನೆ ಮಾಡಿರುವುದು ವಿಶೇಷ.
2ನೇ ವಾರವೂ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುವ ಸುಳಿವು ಸಿಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಪೀರಿಯಡ್ ಆಕ್ಷನ್ ಎಂಟರ್ಟೈನರ್ ಸಿನಿಮಾ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸ್ಯಾಂಡಲ್ವುಡ್ನಲ್ಲೀಗ ‘ಕಾಟೇರ’ನ ಭಜನೆ ಶುರುವಾಗಿದೆ. ಇತ್ತೀಚೆಗೆ ಸಿನಿಮಾ ತಾರೆಯರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಉಪೇಂದ್ರ, ಶ್ರೀಮುರಳಿ, ಬಿ. ಸರೋಜಾ ದೇವಿ, ರಕ್ಷಿತಾ ಪ್ರೇಮ್, ಧನಂಜಯ್ ಸೇರಿದಂತೆ ಹಲವರು ‘ಕಾಟೇರ’ನಿಗೆ ಜೈ ಎಂದಿದ್ದರು.
ಕಳೆದ ಶುಕ್ರವಾರ ಮಧ್ಯರಾತ್ರಿ ಆರಂಭವಾದ ಫ್ಯಾನ್ಸ್ ಶೋಗಳಿಂದಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನೋಡ ನೋಡುತ್ತಲೇ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಿತು. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ಪ್ರೇಕ್ಷಕರು ‘ಕಾಟೇರ’ನನ್ನು ಅಪ್ಪಿಕೊಂಡರು.
ತರುಣ್ ನಿರ್ದೇಶನ, ದರ್ಶನ್ ನಟನೆ, ಮಾಸ್ತಿ ಸಂಭಾಷಣೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ಮಾತ್ರವಲ್ಲ ನಾಯಕಿ ಆರಾಧನಾ, ಶ್ರುತಿ, ಕುಮಾರ್ ಗೋವಿಂದ್, ಬಿರಾದಾರ್ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದೊಳ್ಳೆ ಕಂಟೆಂಟ್ ಜೊತೆಗೆ ದರ್ಶನ್ ಅಭಿಮಾನಿಗಳು ಕೇಳುವ ಮಾಸ್ ಅಂಶಗಳನ್ನು ಸೇರಿಸಿ ತರುಣ್ ಸಿನಿಮಾ ಮಾಡಿ ಗೆದ್ದಿದ್ದಾರೆ.