ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ, ಅನಭಿಷಿಕ್ತ ನಟಸಾರ್ವಭೌಮ ಡಾ ರಾಜ್ ಕುಮಾರ್ ಅಗಲಿ ಇಂದಿಗೆ 18 ವರ್ಷ. ಭಾರತೀಯ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಡಾ ರಾಜ್ ಕುಮಾರ್ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದವರು.
ಅಭಿಮಾನಿಗಳ ಹೃದಯದಲ್ಲಿ ಅವರು ಅಜರಾಮರಾಗಿದ್ದಾರೆ. ಅವರ ಅಚ್ಚಳಿಯದ ಚಿತ್ರಗಳು, ನಟನೆ, ಅದ್ಬುತ ಕಂಠಕ್ಕೆ ಮನಸೋಲದವರಿಲ್ಲ. 2006ರ ಏಪ್ರಿಲ್ 12ರಂದು ಡಾ ರಾಜ್ ಕುಮಾರ್ ಭೌತಿಕವಾಗಿ ಅಗಲಿಹೋದರು. ಆಗ ಅವರಿಗೆ 76 ವರ್ಷವಾಗಿತ್ತು.
1954ರಲ್ಲಿ ಬಂದ ‘ಬೇಡರ ಕಣ್ಣಪ್ಪ’ ಸಿನಿಮಾದಿಂದ 2000ನೇ ಇಸವಿಯಲ್ಲಿ ತೆರೆಕಂಡ ‘ಶಬ್ದವೇಧಿ’ ಚಿತ್ರದವರೆಗೆ ನೂರಾರು ಬಗೆಯ ಪಾತ್ರಗಳಲ್ಲಿ ಅವರ ಅಭಿನಯವನ್ನು ನೋಡುವುದೇ ಚೆಂದ. ಕನ್ನಡ ಎಂದರೆ ಡಾ. ರಾಜ್ಕುಮಾರ್, ಡಾ. ರಾಜ್ಕುಮಾರ್ ಎಂದರೆ ಕನ್ನಡ ಎಂಬಷ್ಟರಮಟ್ಟಿಗೆ ಸ್ಪಷ್ಟವಾಗಿ ಮಾತೃಭಾಷೆ ಮಾತನಾಡುತ್ತಿದ್ದ ಅವರು ಎಲ್ಲರಿಗೂ ಮಾದರಿ.
ಕೇವಲ 3ನೇ ತರಗತಿವರೆಗೆ ಓದಿದ್ದ ಅವರು ನಂತರ ಇಂಗ್ಲಿಷ್ ಕಲಿತು ಡೈಲಾಗ್ ಹೊಡೆದು ಸೈ ಎನಿಸಿಕೊಂಡರು. ಸಿನಿಮಾ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಸಂಗೀತ ಕಲಿಯದೆಯೂ ಹಾಡುಗಳ ಮೂಲಕ ಕೇಳುಗರ ಹೃದಯ ಗೆದ್ದ ಮಹಾನ್ ಗಾಯಕ ಅವರು. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಾಯಕ ನಟ ಡಾ. ರಾಜ್. ಪದ್ಮ ಭೂಷಣ, ಕೆಂಟುಕಿ ಕರ್ನಲ್, ದಾದಾ ಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲ್ಮ್ಫೇರ್ ಸೇರಿದಂತೆ ಅವರಿಗೆ ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.
ಇನ್ನು ರಾಜ್ ಅವರ ನಿಧನ ನಂತರ ಅವರ ಹೆಸರಿನಲ್ಲಿ ಜನ್ಮದಿನ ಮತ್ತು ಪುಣ್ಯದಿನದಂದು ಅಭಿಮಾನಿಗಳ ಸಂಘ, ಕುಟುಂಬ ವರ್ಗದವರು ಹತ್ತಾರು ಕಾರ್ಯಕ್ರಮಗಳು, ನೇತ್ರದಾನ, ರಕ್ತದಾನ, ಅನ್ನದಾನ , ಆರೋಗ್ಯ ತಪಾಸಣೆ ಇತ್ಯಾದಿಗಳನ್ನು ಹಮ್ಮಿಕೊಂಡು ಬಂದಿದ್ದಾರೆ.