ಬೆಂಗಳೂರು: ನಗರದ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅಂಬರೀಶ್ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.
ನಂತರ ವೇದಿಕೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಜೀವನದಲ್ಲಿ ಯಾವತ್ತೂ ಅಂಬಿ ತನಗೆ ಇಂತಹದ್ದು ಬೇಕು ಅಂತ ಬಯಸಿದವರಲ್ಲ ಸಿನಿಮಾ ರಂಗ ಹಾಗೂ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಂಬಿಯದ್ದು ಯಾವತ್ತೂ ಕೊಟ್ಟ ಕೈ ಆಗಿದೆಯೇ ಹೊರತು ಪಡೆದ ಕೈ ಅಲ್ಲ, ಜನರ ಪ್ರೀತಿಯೊಂದೆ ಅವರು ಬಯಸಿದ್ದು ಅದು ಸಿಕ್ಕಿದೆ, ಸಿಗುತ್ತಿದೆ ಎಂದರು.
ಅಂಬರೀಶ್ ಏನೇನು ಕೆಲಸ ಮಾಡಿದ್ದರು ಎಂಬುವುದು ಮಂಡ್ಯದ ಜನರನ್ನು ಕೇಳಿದರೆ ಸಾಕು. ಯಾವ ಕೆಲಸ ಮಾಡಿಕೊಟ್ಟರೂ ಕ್ರೆಡಿಟ್ ಯಾವತ್ತೂ ತಗೊಂಡಿಲ್ಲ. ಯಾವುದೇ ಗಂಭೀರ ಚರ್ಚೆಯಾದರೂ ಅಲ್ಲಿ ಅಂಬಿ ಇದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ, ನಾವೆಲ್ಲ ಆತ್ಮಸಾಕ್ಷಿ ಪಕ್ಕಕ್ಕಿಟ್ಟು ಬದುಕುತ್ತಿದ್ದೇವೆ. ಅಂಬಿಗೆ ನಟನೆ ಮಾಡುವುದು ಕಷ್ಟ ಆಗುತ್ತಿರಲಿಲ್ಲ. ಸಹಜ, ಲೀಲಾಜಾಲವಾಗಿ ನಟಿಸುತ್ತಿದ್ದ ಎಂದು ಸ್ಮರಿಸಿದರು.