ಬೆಂಗಳೂರು : ಮೇಕೆದಾಟು ಯೋಜನೆಯ ಹೋರಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿದೆ. ಈ ಕುರಿತು ಹಿರಿಯ ನಟಿಯರಾದ ಉಮಾಶ್ರೀ, ಜಯಮಾಲ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮತ್ತು ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಕರೊನಾ ಹಿನ್ನೆಲೆ ಸರ್ಕಾರ ಜಾರಿ ಮಾಡಿರುವ ಸರ್ಕಾರದ ರೂಲ್ಸ್ ಅನ್ನು ಫಾಲೋ ಮಾಡ್ತೀವಿ. ಹಾಗೇ ಕರ್ಫ್ಯೂ ಇಲ್ಲದಿರುವ ದಿನ ಮೇಕೆದಾಟು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಕೊಡ್ತೀವಿ. ಪಾದಯಾತ್ರೆಗೆ ಕಲಾವಿದರನ್ನ ನಾವು ಕರೆಯುತ್ತೇವೆ. ಈ ಹಿಂದೆ ಕೂಡ ಮಹಾದಾಯಿ, ಕಾವೇರಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ವಿ. ನಾಡು-ನುಡಿ-ಜಲದ ವಿಚಾರ ಬಂದ್ರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವಾಗಲೂ ಬೆಂಬಲ ನೀಡುತ್ತೆ ಎಂದರು.
ಇದೊಂದು ವಿಶಿಷ್ಟವಾದ ಹೋರಾಟ. ನಮ್ಮ ನೀರಿಗಾಗಿ ನಾವು ಹೋರಾಟ ಮಾಡಬೇಕು. ಎಲ್ಲಾ ಕೇಸ್ಗಳು ಈಗ ಮುಕ್ತಾಯವಾಗಿವೆ. ಕನ್ನಡ ಚಿತ್ರರಂಗಕ್ಕೆ ಒಂದು ಪರಂಪರೆ ಇದೆ. ಡಾ. ರಾಜ್ ಕುಮಾರ್ ಅವರು ಆ ಪರಂಪರೆಯನ್ನ ಹಾಕಿಕೊಟ್ಟಿದ್ದಾರೆ. ಐತಿಹಾಸಿಕ ಹೋರಾಟವನ್ನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಮ್ಮಿಕೊಂಡಿದ್ದಾರೆ. ಈ ಹೋರಾಟಕ್ಕೆ ಎಲ್ಲರೂ ಬೆಂಬಲ ಕೊಡಬೇಕು ಅಂತ ಮನವಿ ಮಾಡ್ತೀವಿ. ನೀರು ಇಲ್ಲದ ಸ್ಥಿತಿ ಬಂದಿದೆ. ಮೇಕೆದಾಟು ಯೋಜನೆಯಿಂದ ನೀರು ಸಿಗಲಿದೆ ಎಂದು ಜಯಮಾಲ ಹೇಳಿದರು.
ನಟಿ ಉಮಾಶ್ರೀ ಮಾತನಾಡಿ, ಮೇಕೆದಾಟು ಹೋರಾಟಕ್ಕೆ ವಾಣಿಜ್ಯ ಮಂಡಳಿ ಬೆಂಬಲ ನೀಡಿದ್ದು ಖುಷಿಯಾಗಿದೆ. ರಾಕ್ಲೈನ್ ವೆಂಕಟೇಶ್ ಅವರು ಪತ್ರ ಕಳುಹಿಸಿದ್ದಾರೆ. ಕಲಾವಿದರು ಇಂತಹ ಸಂದರ್ಭಗಳಲ್ಲಿ ಋಣ ಸಂದಾಯ ಮಾಡಬೇಕು. ಜನರಿಂದ ನಾವು ಎಲ್ಲವನ್ನೂ ಪಡೆದಿದ್ದೇವೆ. ಜನರಿಗಾಗಿ ಹೋರಾಟ ಮಾಡಬೇಕು. ಎಲ್ಲಾ ನಾಯಕ-ನಾಯಕಿಯರು ಸ್ವಯಂಪ್ರೇರಿತರಾಗಿ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ನಟ ಮದನ್ ಪಟೇಲ್ ಮಾತನಾಡಿ, ಇದು ಯಾವುದೇ ರಾಜಕೀಯ ಬಣ್ಣವಿಲ್ಲದ ಹೋರಾಟ. ನಮ್ಮ ನೀರು, ನಮ್ಮ ಹಕ್ಕು. ಈ ಹೋರಾಟ ಕನ್ನಡಿಗರ ಪರವಾಗಿದೆ ಎಂದರು.