.ಸ್ಯಾಂಡಲ್ ವುಡ್: ಇಡೀ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದ ಸಿನಿಮಾ 1973 ರಲ್ಲಿ ತೆರೆಕಂಡ ನಮ್ಮ ಕನ್ನಡದ ‘ಗಂಧದ ಗುಡಿ’ ಡಾ ರಾಜಕುಮಾರ್ ಅವರ ಪಾತ್ರದಿಂದ ಪ್ರೇರಿತರಾಗಿ ಅನೇಕರು ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಈಗ ಇತಿಹಾಸ.
ಇಂದಿಗೂ ಪ್ರಸ್ತುತ ವಿರುವ ಸಂದೇಶವನ್ನು ಇಂದಿನ ಪೀಳಿಗೆಗೆ ಅರ್ಥೈಸಲು ಐದು ದಶಕಗಳ ನಂತರ ಮತ್ತೊಮ್ಮೆ ಗಂಧದಗುಡಿ ನಿಮ್ಮೆದುರು ಬರುತ್ತಿದೆ.
ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ .ನಮ್ಮ ನಾಡಿನ ಜನತೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕೆಂಬ ಕನಸಿನೊಂದಿಗೆ ಪುನೀತ್ ರಾಜ್ ಕುಮಾರ್ ಅವರು ಕೈಗೊಂಡ ವಿಶಿಷ್ಟ ಪಯಣವೇ ಈ ಗಂಧದಗುಡಿ.
ಪುನೀತ್ ರಾಜ್ ಕುಮಾರ್ ಅವರ ದೃಷ್ಟಿಕೋನದಲ್ಲಿ ಕರ್ನಾಟಕದ ಸೊಬಗು ಅನಾವರಣಗೊಳ್ಳುವ ಹೊಸಬಗೆಯ ಈ ಪ್ರಯೋಗಕ್ಕೆ ಅವರು ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು ವೈಲ್ಡ್ ಕರ್ನಾಟಕ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘವರ್ಷ ಅವರನ್ನು.
ಒಬ್ಬ ಸೂಪರ್ ಸ್ಟಾರ್ ನಟ ಮತ್ತು ಒಬ್ಬ ವನ್ಯಜೀವಿ ಛಾಯಾಗ್ರಾಹಕ ಜೊತೆ ಸೇರಿ ಒಂದು ಭೂಪ್ರದೇಶವನ್ನು ಅನ್ವೇಷಣೆ ಮಾಡಿರುವ ಚಿತ್ರವೊಂದು ಬಹುಶಹ ಜಗತ್ತಿನ ಯಾವ ಭಾಷೆಯಲ್ಲಿ ಬಂದಿಲ್ಲವೆಂದು ಹೇಳಬಹುದು.
ನಮ್ಮ ನಾಡು ನಮ್ಮ ಕಾಡುಗಳು ನಮ್ಮ ಭಾಷೆ ನಮ್ಮ ಜನ ನಮ್ಮ ಸಂಸ್ಕೃತಿ ಎಲ್ಲಾ ವಿಷಯಗಳು ಹೇಗೆ ಒಂದನ್ನೊಂದು ಬೆಸೆದುಕೊಂಡಿವೆ ಎಂಬುದನ್ನು ಪುನೀತ್ ರಾಜಕುಮಾರ್ ಅವರು ಅರಸುತ್ತ ಹಂತಹಂತವಾಗಿ ಅರಿಯುವುದರ ಚಿತ್ರಣವೇ ಗಂಧದಗುಡಿ.
ಅತ್ಯಾಧುನಿಕ ಉಪಕರಣಗಳನ್ನು ಬಳಸಿ ನಮ್ಮನಾಡಿಗೆ ದೃಶ್ಯವೈಭವವನ್ನು ಸೆರೆಹಿಡಿದು ಪ್ರೇಕ್ಷಕರಿಗೆ ಉಣ ಪಡಿಸುವುದರ ಜೊತೆಗೆ ಎಲ್ಲಿಯೂ ಬೋಧನೆ ಅನಿಸದಂತೆ ಅತ್ಯಂತ ಕುತೂಹಲಕಾರಿಯಾಗಿ ಒಂದು ಕಥನವನ್ನು ಕಟ್ಟುವ ಪ್ರಯತ್ನ ಈ ಚಿತ್ರದಲ್ಲಿ ಆಗಿದೆ.
ಪಿ ಆರ್ ಕೆ ಪ್ರೊಡಕ್ಷನ್ಸ್ ಮತ್ತು ಮಡ್ಡ್ ಸ್ಕಿಪ್ಪರ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸೇರಿದಂತೆ ಉದ್ಯಮದ ಅತ್ಯುತ್ತಮ ತಂತ್ರಜ್ಞರ ಕುಸುರಿ ಕೆಲಸವಿದೆ. ಚಿತ್ರಮಂದಿರದ ಅನುಭವ ಕ್ಕಾಗಿಯೇ ತಯಾರಾಗಿರುವ ಈ ಚಿತ್ರ ನೋಡುಗರನ್ನು ನೇರವಾಗಿ ನಮ್ಮ ನಾಡಿನ ವಿಶೇಷ ತಾಣಗಳಿಗೆ ಕೊಂಡೊಯ್ದು ರೋಮಾಂಚನಗೊಳಿಸುತ್ತದಷ್ಟೇ ಅಲ್ಲದೆ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ನಮ್ಮ ಪಾತ್ರ ಎಷ್ಟು ಅಗತ್ಯ ಎಂಬುದನ್ನು ಮನದಟ್ಟು ಮನದಟ್ಟು ಮಾಡಿಸಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಗಂಧದಗುಡಿ ಅತಿಶೀಘ್ರದಲ್ಲಿ ತನ್ನ ಕಂಪನ್ನು ವಿಶ್ವದೆಲ್ಲೆಡೆ ಹರಡಲಿದೆ.