ಬೆಂಗಳೂರು: ಇತ್ತೀಚೆಗೆ ಅಗಲಿರುವ ನಟ, ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಂಸ್ಥೆಯ ಸಹಾಯಾರ್ಥ ಇಂದು ನಡೆಯಬೇಕಿದ್ದ ಶೋವೊಂದನ್ನು ಬೆಂಗಳೂರು ಪೊಲೀಸರು ತಡೆದಿದ್ದು, ಇಂದಿನ ಆ ಕಾರ್ಯಕ್ರಮ ರದ್ದಾಗಿದೆ.
ಕಾಮಿಡಿಯನ್ ಮುನಾವರ್ ಫಾರೂಕಿ ಎಂಬವರಿಂದ ನಡೆಯಬೇಕಿದ್ದ ಈ ಹಾಸ್ಯಭರಿತ ಮನರಂಜನಾ ಕಾರ್ಯಕ್ರಮ ಇಂದು ಬೆಂಗಳೂರಿನ ಗುಡ್ ಷೆಪರ್ಡ್ ಆಡಿಟೋರಿಯಮ್ನಲ್ಲಿ ನಡೆಯಬೇಕಿತ್ತು. ಆದರೆ ಮುನಾವರ್ ಫಾರೂಕಿ ಅವರ ಈ ಕಾರ್ಯಕ್ರಮ ನಡೆದಲ್ಲಿ ವಿಧ್ವಂಸಕ ಕೃತ್ಯ ನಡೆಯುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುನಾವರ್ ಫಾರೂಕಿ ಅವರ ಈ ಕಾರ್ಯಕ್ರಮ ನಡೆದಲ್ಲಿ ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವುದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿರುವುದರಿಂದ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ತಡೆ ಹಾಕಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಕಾರ್ಯಕ್ರಮ ರದ್ದಾಗಿರುವ ಕುರಿತು ಟ್ವಿಟರ್ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಮುನಾವರ್, ಪುನೀತ್ ರಾಜಕುಮಾರ್ ಅವರ ಫೌಂಡೇಷನ್ ಸಹಾಯಾರ್ಥವಾಗಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಪುನೀತ್ ಅವರ ಫೌಂಡೇಷನ್ ಅನುಮತಿ ಪಡೆದೇ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಪುನೀತ್ ಅವರ ಹೆಸರು ಬಳಸಿ ಶೋ ಟಿಕೆಟ್ ಮಾರಾಟ ಮಾಡಬಾರದು ಎಂದು ಪುನೀತ್ ಅವರ ಫೌಂಡೇಷನ್ ಅವರು ಸೂಚಿಸಿದ್ದ ಹಿನ್ನೆಲೆಯಲ್ಲಿ ಅದನ್ನು ಹೇಳಿಕೊಂಡಿರಲಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಶೋ ರದ್ದುಗೊಳಿಸಿರುವ ಕುರಿತು ತಮ್ಮ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.