ಕಲಬುರ್ಗಿ (ಡಿ. 03): ಜಿಡಗಾ ಮಠದಿಂದ ನೀಡುವ ಸಿದ್ದಶೀ ಪ್ರಶಸ್ತಿಯನ್ನು ಈ ಬಾರಿ ಪುನೀತ್ಗೆ ಅರ್ಪಣೆ ಮಾಡಲಾಯಿತು. ಮಠದ ಆವರಣದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ರಾಜ್ ಕುಟುಂಬಸ್ಥರು ಕಾರಣಾಂತರದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ‘ಪ್ರಶಸ್ತಿ ಸ್ವೀಕರಿಸಲು ನಾವ್ಯಾರೂ ಆಗಮಿಸಲು ಸಾಧ್ಯವಾಗದ್ದಕ್ಕೆ ರಾಘವೇಂದ್ರ ರಾಜ್ಕುಮಾರ್ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ‘ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ’ ಹಾಡಿನ ಮೂಲಕ ವಿಜಯ್ ಪ್ರಕಾಶ್, ನಮನ ಸಲ್ಲಿಸಿದರು. ‘ಗೊಂಬೆ ಹೇಳುತೈತೆ ಹಾಡು ನಾನು ರಾಜಕುಮಾರ ಅವರುಗಾಗಿ ಹಾಡಿದ್ದು. ಇದೇ ಹಾಡು ಅಪ್ಪು ಅವರಿಗಾಗಿ ಹಾಡುವ ಪ್ರಸಂಗ ಬರಬಹುದೆಂದು ಕಲ್ಪನೆಯೂ ಮಾಡಿರಲಿಲ್ಲ. ಅಪ್ಪು ನಿಧನರಾದ ನಂತ್ರ ಈ ಹಾಡು ಅಪ್ಪು ಅವರಿಗಾಗಿ ವೇದಿಕೆ ಮೇಲೆ ಇದೇ ಮೊದಲ ಬಾರಿಗೆ ಹಾಡುತ್ತಿರುವೆ’ ಎಂದು ಭಾವುಕರಾದರು.
ಅಪ್ಪು ಭಾವಚಿತ್ರಕ್ಕೆ ಶಾಲು ಹೊದಿಸಿ ಜಿಡಗಾ ಮಠದ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯರು ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ‘ ಪುನೀತ್ ರಾಜಕುಮಾರ್ಗೆ ಈ ಬಾರಿಯ ಸಿದ್ದಶ್ರೀ ನೀಡಲು ಮೊದಲೇ ನಿರ್ಣಯಿಸಲಾಗಿತ್ತು. ಆದ್ರೆ ದುರ್ದೈವ ಅಪ್ಪು ನಮ್ಮನ್ನು ಅಗಲಿ ಬಿಟ್ರು. ಅಪ್ಪು ನಮ್ಮಿಂದ ದೂರವಾಗಿಲ್ಲ. ದಾನ ಧರ್ಮಗಳ ಮೂಲಕ ಎಲ್ಲರ ಹೃದಯದಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ. ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ದಾನ ಮಾಡಿರುವ ದಾನಶೂರ ನಮ್ಮ ಪುನೀತ್’ ಎಂದು ಜಿಡಗಾ ಮಠದ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯರು ಬಣ್ಣನೆ ಮಾಡಿದರು.