ಈಗಾಗಲೇ ರಿಲೀಸ್ ಆಗಿರುವ ಟೀಸರ್, ಟ್ರೇಲರ್ ಹಾಗೂ ಲಿರಿಕಲ್ ವೀಡಿಯೋ ಹಾಡಿನ ಮೂಲಕ ಕುತೂಹಲ ಹುಟ್ಟಿಸಿರುವ ಹೊಸ ಚಿತ್ರ ಅಮೃತ ಅಪಾರ್ಟ್ ಮೆಂಟ್ಸ್. ಜಿ9 ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಗುರುರಾಜ ಕುಲಕರ್ಣಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಲಾಸ್ಟ್ ಬಸ್, ಆಕ್ಸಿಡೆಂಟ್ ಸಿನಿಮಾದಲ್ಲಿ ಸಹ ನಿರ್ಮಾಪಕರಾದ ಗುರುರಾಜ ಕುಲಕರ್ಣಿ ನಿರ್ದೇಶಿಸಿ ನಿರ್ಮಿಸಿರುವ ಸಿನಿಮಾ ನವೆಂಬರ್ 26ಕ್ಕೆ ಬಿಡುಗಡೆಯಾಗಲು ಸಕಲ ಸಜ್ಜಾಗಿ ನಿಂತಿದೆ.
ಚಿತ್ರದಲ್ಲಿ ಕೆಜಿಎಫ್, ಯುವರತ್ನ ಸಿನಿಮಾದಲ್ಲಿ ಖಳನಟನಾಗಿ ಗಮನ ಸೆಳೆದಿದ್ದ ನಟ ತಾರಕ್ ಪೊನ್ನಪ್ಪ, ಹಾಗೂ ಊರ್ವಶಿ ಗೋವರ್ಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಬಾಲಾಜಿ ಮನೋಹರ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.
ರಂಗಭೂಮಿ ಕಲಾವಿದೆ. ನೃತ್ಯಗಾರ್ತಿ, ಸಿನಿಮಾ ಕಲಾವಿದೆ ಬಹುಮುಖ ಪ್ರತಿಭೆ ಮಾನಸ ಜೋಶಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಸಿಪಿ ರತ್ನಪ್ರಭಾ ಪಾತ್ರದಲ್ಲಿ ಬಣ್ಣ ಹಚ್ಚಿರುವ ಅವರು ಸಿನಿಮಾ ಬಗ್ಗೆ ಸಖತ್ ಥ್ರಿಲ್ ಆಗಿದ್ದಾರೆ. ಪೊಲೀಸ್ ಗೆಟಪ್ ನಲ್ಲಿ ಗತ್ತು ಗೈರತ್ತು ತೋರಿಸಿರುವ ಇವರು ತಮ್ಮಿಷ್ಟದ ಪಾತ್ರಕ್ಕೆ ಜೀವ ತುಂಬಿದ ಖುಷಿಯಲ್ಲಿದ್ದಾರೆ.
ಹೌದು, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಇವರ ಬಹುಕಾಲದ ಆಸೆಯಂತೆ. ಅಮೃತ ಅಪಾರ್ಟ್ ಮೆಂಟ್ಸ್ ನಲ್ಲಿ ಈ ಪಾತ್ರ ನನಗೊದಗಿ ಬಂದಿದ್ದು ತುಂಬಾ ಖುಷಿಯಿದೆ. ಮರ್ಡರ್ ಮಿಸ್ಟ್ರಿ ಬಗೆಹರಿಸೋ ಪಾತ್ರದಲ್ಲಿ ರೆಬೆಲ್ ಆಗಿ ಕಾಣಿಸಿಕೊಂಡಿದ್ದು, ನಿರ್ದೇಶಕರು ತಮ್ಮ ಪಾತ್ರವನ್ನು ಪವರ್ ಫುಲ್ ಆಗಿ ಹೆಣೆದಿದ್ದಾರೆ. ಈ ಹಿಂದೆ ಲಾಸ್ಟ್ ಬಸ್ ನಲ್ಲಿ ಗುರುರಾಜ್ ಕುಲಕರ್ಣಿ ಜೊತೆ ಕೆಲಸ ಮಾಡಿದ್ದರಿಂದ ಯಾವುದೇ ಅಳುಕಿಲ್ಲದೆ ಈ ಸಿನಿಮಾದಲ್ಲಿ ನಟಿಸಲು ಸಹಕಾರಿಯಾಯ್ತು ಎನ್ನುತ್ತಾರೆ ಮಾನಸ ಜೋಶಿ.
ಉಳಿದಂತೆ ಚಿತ್ರದಲ್ಲಿ ಸೀತಾ ಕೋಟೆ, ಸಂಪತ್ ಮೈತ್ರೇಯ ರಂಗಭೂಮಿ ಕಲಾವಿದರಾದ ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ ಜಾಲಾ, ರಂಗಸ್ವಾಮಿ, ಶಂಕರ ಶೆಟ್ಟಿ, ವೈಷ್ಣವಿ ಮೊದಲಾದ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇದೊಂದು ಪಕ್ಕಾ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಮನರಂಜನೆಯ ರಸದೌತಣ ನೀಡಲು ಇದೇ ತಿಂಗಳ ೨೬ ಕ್ಕೆ ಪರದೆ ಮೇಲೆ ಬರಲಿದೆ. ಚಿತ್ರಕ್ಕೆ ಬಿ.ಎಸ್ ಕೆಂಪರಾಜ್ ಸಂಕಲನ, ಅರ್ಜುನ್ ಅಜಿತ್ ಛಾಯಾಗ್ರಹಣ, ಎಸ್. ಡಿ ಅರವಿಂದ್ ಸಂಗೀತ ಸಂಯೋಜನೆಯಿದೆ.
https://www.youtube.com/watch?v=06KoEEKqFZg&authuser=0