ಬೆಂಗಳೂರು: ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ಅವರನ್ನು ‘ವನ್ಯಜೀವಿ ಉಳಿಸಿ ಅಭಿಯಾನ’ದ ರಾಯಭಾರಿಯಾಗಿ ನೇಮಿಸಲಾಗಿದೆ. ಈ ನಿಟ್ಟಿನಲ್ಲಿ ಸೀಸನ್ ನಾಲ್ಕನ್ನು ಹೋಸ್ಟ್ ಮಾಡಲಿದ್ದಾರೆ.
ಸಾಮಾಜಿಕ ಜವಾಬ್ದಾರಿಯಲ್ಲಿಮಾಧ್ಯಮ ಸಂಸ್ಥೆಗಳಾದ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಮತ್ತು ‘ಕನ್ನಡಪ್ರಭ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ವೃತ್ತಿಯ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ಕ್ಕೆ ಬುಧವಾರ ಅಭೂತಪೂರ್ವ ಚಾಲನೆ ದೊರೆಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ‘ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿಅವರು ಅಭಿಯಾನದ ಲೋಗೋ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ರಿಷಬ್ ಶೆಟ್ಟಿ ಅವರನ್ನು ಈ ವಿಶೇಷ ಅಭಿಯಾನದ ರಾಯಭಾರಿಯಾಗಿ ಅಧಿಕೃತವಾಗಿ ಘೋಷಿಸಲಾಯಿತು.
4ನೇ ಆವೃತ್ತಿಗೆ ಚಾಲನೆ: ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಗಳ ಅಡಿಯಲ್ಲಿ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ 2017ರಿಂದ ವನ್ಯಜೀವಿ ಸಂರಕ್ಷಣಾ ಅಭಿಯಾನ ನಡೆಸಿಕೊಂಡು ಬರುತ್ತಿವೆ. 2017, 2018 ಮತ್ತು 2019ರಲ್ಲಿ ಯಶಸ್ವಿಯಾಗಿ ಮೂರು ಆವೃತ್ತಿಯಲ್ಲಿ ನಾಡಿನಾದ್ಯಂತ ಅಭಿಯಾನ ಹಮ್ಮಿಕೊಂಡು ವನ್ಯಜೀವಿಗಳ ಬಗ್ಗೆ ಬೃಹತ್ ಜನಜಾಗೃತಿ ಮೂಡಿಸುವ ಕೆಲಸ ಮಾಡಿವೆ. ಈ ಹಿಂದೆ ಅಭಿಯಾನದ ರಾಯಭಾರಿಗಳಾಗಿ ಖ್ಯಾತ ನಟ ಪ್ರಕಾಶ್ ರೈ, ನಟಿ ಮಯೂರಿ, ನಟ ಶ್ರೀಮುರುಳಿ, ನಟಿ ಶೃತಿನಾಯ್ಡು ರಾಯಭಾರಿಗಳಾಗಿ ಅಭಿಯಾನದ ಯಶಸ್ಸಿಗೆ ಕೈಜೋಡಿಸಿದ್ದರು.
ತಮ್ಮ ಅಧಿಕಾರಾವಧಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ನೀಡಿದ್ದಾರೆ. ಕೋವಿಡ್ ಕಾರಣದಿಂದ ಕೆಲ ಕಾಲ ಸ್ಥಗಿತಗೊಂಡಿದ್ದ ಅಭಿಯಾನ ಈಗ ಪುನಾರಂಭವಾಗಿದೆ.