ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಿನ್ನೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಅವರ ಮೃತದೇಹವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಿನಿಮಾ ಇಂಡಸ್ಟ್ರಿಯ ನಟ, ನಟಿಯರು ಹಾಗೂ ಕಲಾವಿದರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದೀಗ ನಟ ಯಶ್ ಅವರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಅಂತಿಮ ದರ್ಶನ ಪಡೆದುಕೊಂಡ ಬಳಿಕ ಮಾತನಾಡಿದ ನಟ ಯಶ್ ಅವರು, ಪ್ರಪಂಚದಲ್ಲಿ ತುಂಬಾ ಜನ ಹುಟ್ಟುತ್ತಾರೆ, ತುಂಬಾ ಜನ ಸಾಯ್ತಾರೆ. ಬದುಕು ಎನ್ನುವುದು ಒಂದು ಅವಕಾಶ. ಆ ಅವಕಾಶದಲ್ಲಿ ನೀವು ಎಷ್ಟು ಧೈರ್ಯ ಮಾಡುತ್ತೀರಾ, ಏನು ಸಾಧಿಸುತ್ತೀರಾ ಹಾಗೂ ಯಾವ ಮಟ್ಟಕ್ಕೆ ನಿಮ್ಮ ಬದುಕನ್ನು ರೂಪಿಸಿಕೊಳ್ತಿರಾ ಎನ್ನುವುದಕ್ಕೆ ಉದಾಹರಣೆ ದ್ವಾರಕೀಶ್ ಎಂದು ಹೇಳಿದ್ದಾರೆ.
ಸಿನಿಮಾ ಎಲ್ಲ ನಾರ್ಮ್ಸ್ ಇರುತ್ತಾಲ್ಲ, ಹೀಗೆ ಇರಬೇಕು, ಇಷ್ಟೇ ಇರಬೇಕು ನಾಯಕನಾಗೋಕೆ ಇದೇ ತರ ಇರಬೇಕು. ನಿರ್ಮಾಪಕನಾಗೋಕೆ ಹೀಗೆಲ್ಲ ಇರಬೇಕು ಎನ್ನುವ ಕಲ್ಪನೆಗಳನ್ನು ಹೊಡೆದು ದ್ವಾರಕೀಶ್ ಅವರು ತಮ್ಮದೇ ಆದ ಸಾಧನೆ ಮಾಡಿದ ಮಹಾನ್ ಚೇತನವಾಗಿದ್ದಾರೆ ಎಂದು ಹೇಳಿದರು.