ಸ್ಯಾಂಡಲ್ ವುಡ್: ವಿಲನ್ ಆಗಿ ಎಂಟ್ರಿ ಕೊಟ್ಟು ಕನ್ನಡ ಚಿತ್ರರಂಗದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿ ಸೂಪರ್ ಸ್ಟಾರ್ ಅನ್ನಿಸಿಕೊಂಡಿವರು ಶಶಿಕುಮಾರ್. ಇದೀಗ ಅವರ ಮಗ ಕೂಡ ಚಂದನವನದಲ್ಲಿ ಹೀರೋ ಆಗಿ ಪಾದರ್ಪಣೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಕ್ಷಿತ್ ಶಶಿಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಓ ಮೈ ಲವ್ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ಹೌದು ಜಿಸಿಬಿ ಪ್ರೊಡಕ್ಷನ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ವೆಚ್ಚ ದಲ್ಲಿ ನರ್ಮಿಸುತ್ತಿರುವ ಓ ಮೈ ಲವ್ ಚಿತ್ರದ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಸಂಪೂರ್ಣಗೊಂಡಿದೆ. ಇನ್ನುಳಿದ ಮೂರು ಹಾಡುಗಳು ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಕಳೆದವಾರವಷ್ಟೆ ವಿ. ನಾಗೇಂದ್ರ ಪ್ರಸಾದ್ ರಚಿಸಿದ ‘ಏನಾಯ್ತೊ ಕಾಣೆ…. ಏನಾಯ್ತೊ ಕಾಣೆ ತಂಗಾಳಿ ಸುರಿದಂತೆ’ ಎಂಬ ಹಾಡನ್ನು ಬೆಂಗಳೂರಿನ ಯಲಹಂಕದ ಮೀನಾಕ್ಷಿ ಕಾಲೇಜಿನಲ್ಲಿ ಚಿತ್ರೀಕರಿಸಲಾಯಿತು. ವಿ ಮುರುಳಿ ಅವರ ನೃತ್ಯ ಸಂಯೋಜನೆಯಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್, ನಾಯಕಿ ಕರ್ತಿ ಕಲ್ಕೆರೆ, ದೀಪಿಕಾ, ಅಕ್ಷತಾ, ಸುವೇದ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಈ ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಚಿತ್ರಕಥೆ- ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದೊಂದು ಪಕ್ಕಾ ಲವ್ ಸ್ಟೋರಿ ಆಗಿದ್ದರೂ ಇದರಲ್ಲಿ ಕಾಮಿಡಿ, ಆಕ್ಷನ್ ಮತ್ತು ಸೆಂಟಿಮೆಂಟ್ ಗಳಿಗೇನು ಕೊರತೆಯಿಲ್ಲ. ಸಿನಿಮಾದಲ್ಲಿ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಮತ್ತು ತೆಲುಗು ಖಳನಟ ದೇವ್ ಗಿಲ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ ಸಂಯೋಜನೆ, ಹಾಲೇಶ್ ಎಸ್ ಛಾಯಾಗ್ರಹಣವಿದೆ. ದೀಪಿಕಾ, ಆರಾಧ್ಯ ಪೃಥ್ವಿರಾಜ್, ಸಾಧುಕೋಕಿಲ, ಪವಿತ್ರ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ