ಗದಗ : ಪತಿಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಪತ್ನಿ ಕೊಲೆಗೈದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ವಿಶ್ವನಾಥ ಹಾದಿಮನಿ (28) ಕೊಲೆಯಾದ ಯುವಕ. ಮೃತರ ಪತ್ನಿ ಕವಿತಾ (ಶ್ವೇತಾ) ಹಾದಿಮನಿ (26) ಕೊಲೆ ಆರೋಪಿಯಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ.

ವಿಶ್ವನಾಥ ಹಾದಿಮನಿ ಬಾಗಲಕೋಟೆಯ ಶ್ರೀಕುಮಾರೇಶ್ವರ ನಗರ ಬಡಾವಣೆ ನಿವಾಸಿ, ದೂರದ ಸಂಬಂಧಿಕಳೂ ಆಗಿರುವ ಕವಿತಾಳನ್ನು ಪ್ರೀತಿಸಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ 2022ರ ಫೆ. 7ರಂದು ವಿವಾಹವಾಗಿದ್ದರು. ಬಳಿಕ ಇವರೊಳಗೆ ವೈಮನಸ್ಸು ಉಂಟಾಗಿದ್ದು, ಕವಿತಾ ಮೂರು ವರ್ಷಗಳ ಹಿಂದೆಯೇ ತವರು ಮನೆಗೆ ತೆರಳಿದ್ದಳು.

ಇತ್ತೀಚೆಗೆ ವಿಶ್ವನಾಥನ ಸಹೋದರಿಯ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ತಂದೆ-ತಾಯಿ ಒತ್ತಾಯದ ಮೇರೆಗೆ ಕವಿತಾ ಇತ್ತೀಚೆಗೆ ರಡ್ಡೆರನಾಗನೂರ ಗ್ರಾಮಕ್ಕೆ ಆಗಮಿಸಿದ್ದಳು. ನಾದಿನಿಯ ಮದುವೆ ಬಳಿಕ ಕವಿತಾ ಪುನಹ ತವರಿಗೆ ವಾಪಸಾಗಿದ್ದಳು.

ಒಂದು ವಾರದ ಬಳಿಕ ಅಂದರೆ ಮೇ 18ರಂದು ಕವಿತಾ ಪತಿಯ ಮನೆಗೆ ವಾಪಸಾಗಿದ್ದಳು. ಮಂಗಳವಾರ ರಾತ್ರಿ ವಿಶ್ವನಾಥ ಮನೆಯ ಕೋಣೆಯಲ್ಲಿ ಮಲಗಿದ್ದಾಗ ವಿಶ್ವನಾಥರ ತಲೆಗೆ ಕವಿತಾ ಕಬ್ಬಿಣದ ರಾಡ್ ನಿಂದ ಬಲವಾಗಿ ಹೊಡೆದಿದ್ದು, ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವಿಶ್ವನಾಥರ ತಾಯಿ ಗೌರವ್ವ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ನರಗುಂದ ಠಾಣೆಯ ಪೊಲೀಸರು ಆರೋಪಿ ಕವಿತಾಳನ್ನು ಬಂಧಿಸಲಾಗಿದೆ.