ಒಂದು ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಮುಲ್ಯವಾದದ್ದು. ತಮ್ಮ ಜೀವನದುದ್ದಕ್ಕೂ ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವನ್ನು ಮೂಡಿಸಿ ಜ್ಞಾನವನ್ನು ನೀಡುವ ಶಿಕ್ಷಕ ನಮ್ಮ ಪಾಲಿಗೆ ಆ ದೇವರು ಕೊಟ್ಟ ವರ. ಇಂತಹ ಶಿಕ್ಷಕರಿಗೆ ಗೌರವ ಸೂಚಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
‘ಒಂದು ಅಕ್ಷರ ಕಲಿಸಿದಾತನೂ ಸಹ ಗುರು’ ಎಂಬ ಗುರು ಪರಂಪರೆಯ ಶಿಕ್ಷಣ ವ್ಯವಸ್ಥೆ ನಮ್ಮ ದೇಶದಲ್ಲೀಗ ಇಲ್ಲದೇ ಹೋದರೂ ಸಹ ಶಿಕ್ಷಣ ನೀಡುವ ಶಿಕ್ಷಕರಿಗೆ ಎಲ್ಲಿಲ್ಲದ ಗೌರವ ನಮ್ಮ ದೇಶದಲ್ಲಿ ಮಾತ್ರ. ಗುರುಗಳೆಂದ್ರೆ ಪೋಷಕರಿಗಿಂತ ಹೆಚ್ಚು ಎಂಬ ಭಾವನೆ ನಮ್ಮೆಲ್ಲರಲ್ಲೂ ಇರುವುದು ಮಿಥ್ಯವಲ್ಲ. ಭಾರತ ದೇಶದಲ್ಲಿ ಈ ದಿನಾಚರಣೆಗೆ ಎಲ್ಲಿಲ್ಲದ ಮಹತ್ವ. ಏಕೆಂದರೆ ನಮ್ಮ ದೇಶದಲ್ಲಿ ಶಿಕ್ಷಕ ವೃತ್ತಿಗೆ ಸಿಗುವ ಗೌರವ, ಮನ್ನಣೆ ಬೇರೆ ಯಾವುದೇ ವೃತ್ತಿಗೂ ಸಿಗುವುದಿಲ್ಲ.
ಸೆಪ್ಟೆಂಬರ್ 5 ರಂದೇ ಶಿಕ್ಷಕರ ದಿನಾಚರಣೆ ಆಚರಿಸೋದು ಏಕೆ?
1888 ರಲ್ಲಿ ಈ ದಿನದಂದು ಜನಿಸಿದ ದೇಶದ ಮೊದಲ ಉಪರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿ, ವಿದ್ವಾಂಸ, ತತ್ವಜ್ಞಾನಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಮಾಜಕ್ಕೆ ಶಿಕ್ಷಕರ ಅಮೂಲ್ಯ ಕೊಡುಗೆಯನ್ನು ಗುರುತಿಸಲು ಸೆ.5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಸೂಚಿಸಿದರು. ಅಂದಿನಿಂದ ವಿಶ್ವ ಶಿಕ್ಷಕರ ದಿನವನ್ನು ಸೆ.5 ರಂದು ಆಚರಿಸಲಾಗುತ್ತದೆ.
ಮಹತ್ವ:
ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಅವರ ಜೀವನದಲ್ಲಿ ಶಿಕ್ಷಕರು ಹೊಂದಿರುವ ಆಳವಾದ ಪ್ರಭಾವವನ್ನು ವ್ಯಕ್ತಪಡಿಸಲು ಇದು ಉತ್ತಮ ಅವಕಾಶವಾಗಿದೆ.
ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಆದ್ದರಿಂದ ಈ ಶಿಕ್ಷಕ ವೃತ್ತಿಗೆ ಎಲ್ಲೆಡೆಯೂ ಭಾರಿ ಮಹತ್ವ. ಜೀವನದ ಪ್ರತಿ ಹಂತದಲ್ಲೂ ಶಿಕ್ಷಕರು ಸ್ನೇಹಿತ ಅಥವಾ ಮಾರ್ಗದರ್ಶಕರ ರೂಪದಲ್ಲಿ ನಮ್ಮನ್ನು ಬೆಂಬಲಿಸುತ್ತಲೇ ಇರುತ್ತಾರೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಮಾತು ಎಲ್ಲೆಡೆ ವ್ಯಾಪಿಸಿದೆ.
ಆಚರಣೆ ಹೇಗೆ:
ಈ ದಿನ ತಮ್ಮ ನೆಚ್ಚಿನ ಶಿಕ್ಷಕರಿಗೆ ಅವರ ಕೃತಜ್ಞತೆ ಮತ್ತು ಪ್ರೀತಿಯನ್ನು ತಿಳಿಸಲು ಕೈಯಿಂದ ಮಾಡಿದ ಕಾರ್ಡ್ಗಳನ್ನು ಒಳಗೊಂಡಂತೆ ಹೂವುಗಳು, ಸಿಹಿತಿಂಡಿಗಳು, ಚಾಕೊಲೇಟ್ಗಳು ಮತ್ತು ಇನ್ನಿತರ ಉಡುಗೊರೆಗಳನ್ನು ವಿದ್ಯಾರ್ಥಿಗಳು ನೀಡುತ್ತಾರೆ.
ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಹಿರಿಯ ವಿದ್ಯಾರ್ಥಿಗಳು ತರಗತಿಗಳ ಉಸ್ತುವಾರಿ ವಹಿಸುತ್ತಾರೆ. ಈ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸ್ಮರಣೀಯವನ್ನು ಕಳೆಯುತ್ತಾರೆ.