ರಾಜ್ಯದಲ್ಲಿ ವಿದ್ಯುತ್ ಕೊರತೆ ಇಡೀ ರಾಜ್ಯವೇ ಕತ್ತಲಿನಲ್ಲಿ ಮುಳುಗಿರುವಂತಹ ವಾತಾವರಣವಿದೆ. ನಗರ ಪ್ರದೇಶಗಳಲ್ಲಿಯೇ ಗಂಟೆಗಟ್ಟಲೇ ವಿದ್ಯುತ್ ಕಡಿತಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಸುಮಾರು 3 ಸಾವಿರ ದಶಲಕ್ಷ ಯುನಿಟ್ ವಿದ್ಯುತ್ ಕೊರತೆ ವಿದ್ಯುತ್ ಕೊರತೆಯಾಗಿದೆ ಎಂದು ಹೇಳಲಾಗುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಪರದಾಟ ಅನುಭವಿಸುತ್ತಿದ್ದು, ರೈತರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆಯ ಆಳ ಆಗಲ ವಿವರ ಇಲ್ಲಿದೆ. ಪ್ರತಿ ವರ್ಷ ಸಕಾಲಕ್ಕೆ ಮಳೆಯಾಗುತ್ತಿದ್ದ ಕಾರಣ ಡ್ಯಾಂಗಳು ತುಂಬುತ್ತಿದ್ದವು. ಈ ಬಾರಿ ಮಳೆ ಕೈ ಕೊಟ್ಟಿದ್ದು, ಜಲಾಶಯಗಳು ಬರಿದಾಗುವ ಹಂತ ತಲುಪಿದೆ.
ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೀಗ ಅದು ಉಲ್ಟಾ ಆಗಿದೆ. ರಾಜ್ಯದಲ್ಲಿ ಜಲವಿದ್ಯುತ್ ಸೇರಿದಂತೆ ಎಲ್ಲ ರೀತಿಯ ವಿದ್ಯುತ್ ಉತ್ಪಾದನೇ ತೀವ್ರವಾಗಿ ತಗ್ಗಿದ್ದು, ಮಳೆಗಾಲದಲ್ಲಿಯೂ ಬೇಸಿಗೆ ರೀತಿಯ ವಾತಾವರಣದಿಂದಾಗಿ ಈ ವರ್ಷ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ನಲ್ಲಿ ವಿದ್ಯುತ್ ಬೇಡಿಕೆ ಅತಿ ಹೆಚ್ಚಾಗಿದೆ.
ಮಳೆ ಸರಿಯಾಗಿ ಸುರಿಯದ ಕಾರಣ ಕಾರಣ ರೈತರು ಹೆಚ್ಚಾಗಿ ಪಂಪ್ಸೆಟ್ ಬಳಸಲಾರಂಭಿಸಿದ್ದಾರೆ. ಆ ಕಾರಣದಿಂದ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ವಿಂಡ್ ಪವರ್, ಸೋಲಾರ್ ನಿಂದ ಎಷ್ಟು: ರಾಜ್ಯದ ವಿದ್ಯುತ್ ಉತ್ಪಾದನೆಯ ಪೈಕಿ ಪವನ ವಿದ್ಯುತ್ ಪಾಲು ಶೇ.17ರಷ್ಟು (5250 ಮೆವಾ)ಇದ್ದರೆ, ಸೋಲಾರ್ ವಿದ್ಯುತ್ ಶೇ.25ರಷ್ಟು (8073 ಮೆವಾ)ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ.
ರಾಜ್ಯದ ಹೆಚ್ಚಿನ ಎಲ್ಲಾ ಜಲಾಶಯಗಳು ಮಳೆಗಾಲದಲ್ಲಿಯೇ ತುಂಬಿಲ್ಲ. ಪ್ರತಿ ಜಲಾಶಯಗಳು ಶೇ.50ರಷ್ಟು ಕೂಡ ಭರ್ತಿಯಾಗಿಲ್ಲ. ಅದೇ ರೀತಿ ಕಲ್ಲಿದ್ದಲಿನ ಕೊರತೆ ಉಷ್ಣವಿದ್ಯುತ್ ಸ್ಥಾವರಗಳನ್ನು ಬಹುವಾಗಿ ಕಾಡುತ್ತಿದೆ. ಅದೇ ರೀತಿ ಹೆಚ್ಚಿನ ಪ್ರಮಾಣದ ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಮಿತವಾಗಿ ಜೂನ್ ತನಕ ಬಳಕೆ ಮಾಡಬೇಕಾಗಿದೆ. ಆದ್ದರಿಂದ 14 ದಶಲಕ್ಷ ಯುನಿಟ್ ಗಿಂತಲೂ ಕಡಿಮೆ ಉತ್ಪಾದನೆ ಮಾಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೆಕ್ಷನ್ 11 ಆದೇಶ ಹೊರಡಿಸಿದ್ದು, ಎಲ್ಲಾ ಮೂಲಗಳಿಂದ ಬರುವ ವಿದ್ಯುತ್ ಘಟಕಗಳ ಉತ್ಪಾದನೆಯನ್ನು ರಾಜ್ಯದ ಬೇಡಿಕೆ ನೀಗಿಸಿಕೊಳ್ಳಲು ಕ್ರಮ ವಹಿಸಲಾಗಿದೆ.
ಸಿಎಂ ಅಧಿಕೃತ ಹೇಳಿಕೆ
ರಾಜ್ಯದಲ್ಲಿ ವಿದ್ಯುತ್ ಕೊರತೆಗೆ ಹಿಂದಿನ ಸರ್ಕಾರಗಳು ಕಾರಣ. 2013 – 18ರ ನಮ್ಮ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ದುಪ್ಪಟ್ಟಾದುದ್ದು ಹೊರತುಪಡಿಸಿದರೆ, ನಂತರದ ಬಿಜೆಪಿ ಅಥವಾ ಕುಮಾರಸ್ವಾಮಿ ಅವರ ಅವಧಿಯಲ್ಲಿ ಒಂದೇ ಒಂದು ಮೆ.ವ್ಯಾಟ್ ವಿದ್ಯುತ್ತ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಿಲ್ಲ. ಮಳೆ ಅಭಾವದಿಂದಾಗಿ ಪಂಪಸೆಟ್ ಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ. ಸಾಧಾರಣವಾಗಿ, ಅಕ್ಟೋಬರ್ ಮಾಹೆಯವರೆಗೆ 10,000 ಮೆ.ವ್ಯಾ ವಿದ್ಯುತ್ ಖರ್ಚಾಗುತ್ತಿತ್ತು. ಆದರೆ ಈ ಬಾರಿ 16,000 ಮೆ.ವ್ಯಾಟ್ ಖರ್ಚಾಗುತ್ತಿದೆ. ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಆದ್ದರಿಂದ ವಿದ್ಯುತ್ ಸಮಸ್ಯೆ ತಲೆದೋರಿರುವುದು ನಿಜ. ಈ ಬಗ್ಗೆ ಸಭೆ ನಡೆಸಿ, ರೈತರಿಗೆ ಮೂರು ಫೇಸ್ ಗಳಲ್ಲಿ 5 ಗಂಟೆಗಳ ಕಾಲ ಸತತ ವಿದ್ಯುತ್ ನೀಡಬೇಕು, ಹೊರಗಿನಿಂದ ವಿದ್ಯುತ್ ಖರೀದಿಸಲು ಸೂಚನೆ ನೀಡಲಾಗಿದೆ. ಕಬ್ಬು ಅರೆಯುವಿಕೆಯಿಂದ ವಿದ್ಯುತ್ ಕೋ ಜನರೇಷನ್ ನತ್ತಲೂ ಗಮನ ಹರಿಸಲು ಸೂಚಿಸಲಾಗಿದೆ. ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.