ಮುಂಬೈ: ಸಾರ್ವಜನಿಕ ಸಾರಿಗೆಯ ಬಳಕೆಗೆ ಜನರು ಒತ್ತು ನೀಡಬೇಕಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದರು. ಶೇ. 40 ವಾಯುಮಾಲಿನ್ಯ ರಸ್ತೆ ಸಾರಿಗೆಯಿಂದ ಉಂಟಾಗುತ್ತದೆ ಎಂದು ಅವರು ವಿವರಿಸಿದರು.
ಬಂದರು, ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಕುರಿತ 11 ನೇ ದ್ವೈವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಪರಿಸರ ಸಹ್ಯ ಸಾರಿಗೆ ಉತ್ತೇಜನಕ್ಕೆ ಸರ್ಕಾರ ವಿವಿಧ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಈ ನಿಟ್ಟಿನಲ್ಲಿ ಮುಂಬೈ ಮತ್ತು ಬೆಂಗಳೂರು ಬಸ್ ಸೇವೆಗಳ ಡಬಲ್ ಡೆಕ್ಕರ್ ಬಸ್ಸುಗಳನ್ನು ಉಲ್ಲೇಖಿಸಿಸಿದರು. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 65,000 ಕೋಟಿ ರೂಪಾಯಿ ಮೌಲ್ಯದ ರಸ್ತೆ ಯೋಜನೆಗಳು ನಡೆಯುತ್ತಿವೆ. ರಸ್ತೆ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು 260 ರೋಪ್ವೇಗಳು ಮತ್ತು ಕೇಬಲ್ ಕಾರ್ಗಳು ಮತ್ತು ಇತರ ಸಾರ್ವಜನಿಕ ಸಾರಿಗೆ ವಿಧಾನಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಹೈಡ್ರೋಜನ್ ಭವಿಷ್ಯದ ಇಂಧನವಾಗಿರುವುದರಿಂದ, ಇಂಧನ ವೆಚ್ಚ ಮತ್ತು ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಲು ಮುಂಬೈನಲ್ಲಿ ಮೆಥನಾಲ್ ಇಂಧನವಾಗಿ ಬಳಸುವ ಟ್ರಕ್ಗಳು ಮತ್ತು ಬಸ್ಗಳ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರ ಚಿಂತಿಸಿದೆ ಎಂದು ವಿವರಿಸಿದರು.