ಮೈಸೂರು ಜಿಲ್ಲೆಗೆ ಸೇರಿದ ಐತಿಹಾಸಿಕ ಕ್ಷೇತ್ರ ತಲಕಾಡು ಬಳಿಯಿರುವ ಮುಡುಕುತೊರೆ ನಿಸರ್ಗ ಸೌಂದರ್ಯದ ನಲೆವೀಡು. ಇಲ್ಲಿಗೆ ತೆರಳಿದವರ ಕಣ್ಣಿಗೆ ವಿಶಾಲವಾಗಿ ಹರಿಯುವ ಕಾವೇರಿ ನದಿ. ಸುತ್ತ ಮುತ್ತ ಹಸಿರಿನಿಂದ ಕಂಗೊಳಿಸುವ ನಿಸರ್ಗ. ಬೆಟ್ಟದ ಮೇಲೆ ಭವ್ಯ ಮಲ್ಲಿಕಾರ್ಜುನ ಸ್ವಾಮಿ ದೇಗುಲನ್ನೊಳಗೊಂಡ ಪ್ರಾಕೃತಿಕ ಸೌಂದರ್ಯ ಕಣ್ಣಿಗೆ ರಾಚುತ್ತದೆ. ಹಾಗಾಗಿಯೇ ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರೂ ಈ ತಾಣಕ್ಕೆ ಆಗಮಿಸಿ, ಇಲ್ಲಿನ ನಿಸರ್ಗ ಸಿರಿಯನ್ನು ಮನದಣಿಯೆ ಸವಿಯುತ್ತಾರೆ.
ಮುಡುಕುತೊರೆ ಕ್ಷೇತ್ರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಹುಶಃ ಮುಡುಕುತೊರೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಇನ್ನು ಇಲ್ಲಿನ ಸೋಮಗಿರಿ ಬೆಟ್ಟದ ಮೇಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದ ಆಧಿದೈವ ಮಲ್ಲಿಕಾರ್ಜುನ ಲಿಂಗವೂ ಕೂಡ ತಲಕಾಡು ಪಂಚಲಿಂಗದೊಂದಿಗೆ ಸೇರಿರುವುದು ಮತ್ತೊಂದು ವಿಶೇಷತೆ.
ಈಗ ಮಳೆ ಸುರಿದು ನಿಸರ್ಗ ಹಸಿರಾಗಿರುವುದರಿಂದ ಕಾವೇರಿ ನದಿ ಹರಿಯುವ ದಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ನಿಸರ್ಗ ಪ್ರೇಮಿಗಳನ್ನು ಕೈಬೀಸಿ ಕರೆದಂತೆ ಭಾಸವಾಗುತ್ತಿದೆ. ಪ್ರಕೃತಿ ರಮಣೀಯ ತಾಣವಾಗಿಯೂ, ಐತಿಹಾಸಿಕ ಕ್ಷೇತ್ರವಾಗಿಯೂ ಗಮನಸೆಳೆದಿರುವ ಮುಡುಕುತೊರೆ ಒಂದೊಳ್ಳೆಯ ಪ್ರವಾಸಿತಾಣವಾಗಿಯೂ ಎಲ್ಲರ ಗಮನಸೆಳೆಯತ್ತಾ ಬಂದಿದೆ.