ನಾಗರ ಪಂಚಮಿಯನ್ನು ದೇಶದಾದ್ಯಂತ ಹಿಂದೂಗಳು ಆಚರಿಸುವ ಒಂದು ಹಬ್ಬ. ಇಡೀ ಭಾರತದಾದ್ಯಂತ ಈ ಹಬ್ಬವನ್ನು ಶ್ರದ್ಧಾ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ.
ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ನಾಗರ ಪಂಚಮಿಯನ್ನು ಆಗಸ್ಟ್ 2ರಂದು ಆಚರಿಸಲಾಗುತ್ತಿದೆ.
ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.
ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ ‘ನಾಗದೇವತೆ’ ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ನಾಗದೇವತೆಯ ಆರಾಧನೆಯು ಹಿಂದೂ ಧರ್ಮದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ನಾಗರ ಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ವ್ಯಕ್ತಿಯು ಶತ್ರುಗಳ ಭಯದಿಂದ ಮುಕ್ತಿಯನ್ನು ಹೊಂದುತ್ತಾನೆ ಮತ್ತು ನವೀಕರಿಸಬಹುದಾದ ಪುಣ್ಯವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ನಾಗದೇವತೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಹಾವು ಕಡಿತದ ಭಯವು ದೂರಾಗುತ್ತದೆ. ಜಾತಕಕ್ಕೆ ಸಂಬಂಧಿಸಿದ ಕಾಳಸರ್ಪ ದೋಷವೂ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ.
ನಾಗರ ಪಂಚಮಿಯ ದಿನ ಜನರು ಭೂಮಿಯನ್ನು ಅಗೆಯಲು ಹೋಗುವುದಿಲ್ಲ. ಅದರ ಬದಲಿಗೆ ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ಎಲ್ಲಾ ಭಾಗಗಳಲ್ಲಿ ಬಹುತೇಕ ಒಂದೇ ಬಗೆಯಲ್ಲಿ ಆಚರಿಸಲಾಗುತ್ತದೆ.
ನಾಗರಪಂಚಮಿ ಹಬ್ಬ ಹೆಣ್ಣು ಮಕ್ಕಳಿಗೆ ವಿಶೇಷ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆಯೂ ಇದೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಈ ದಿನ ಗೌರವಿಸಲಾಗುತ್ತದೆ.