ಮೈಸೂರು: ಆಷಾಢದ ಮಳೆಯಲ್ಲಿ ಮಿಂದೆದ್ದ ಚಾಮುಂಡಿಬೆಟ್ಟ ಪಚ್ಚೆ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದು, ಆ ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬವಾಗಿದೆ.
ಮಳೆಯಲ್ಲಿ ತೊಯ್ದು, ಮಂಜಿನಲ್ಲಿ ಮುಳುಗಿ, ರವಿಕಿರಣದಲ್ಲಿ ಮಿನುಗಿ ಹಸಿರ ರಂಗನ್ನು ಚೆಲ್ಲುತ್ತಿರುವ ಚಾಮುಂಡಿಬೆಟ್ಟದ ಸೊಬಗನ್ನು ಹತ್ತಿರದಿಂದ ಸವಿಯುವುದೇ ಮರೆಯಲಾರದ ಅನುಭವ. ಪ್ರತಿದಿನವೂ ನೋಡಲು ಅದೇ ಚಾಮುಂಡಿಬೆಟ್ಟವಾದರೂ ಅದು ನಮ್ಮ ಕಣ್ಣಿಗೆ ತೆರೆದುಕೊಳ್ಳುವ ನೋಟ ಮಾತ್ರ ಹತ್ತು ಹಲವು.
ನಸುಕಿನಲ್ಲಿ ಒಬ್ಬರಿಗೊಬ್ಬರು ಕಾಣದಷ್ಟು ದಟ್ಟವಾದ ಮಂಜಿನಲ್ಲಿ ಜತೆಗೆ ಜಿಟಿ ಜಿಟಿ ಮಳೆಯಲ್ಲಿ ಬೀಸುವ ತಂಗಾಳಿಯಲ್ಲಿ ಚಾಮುಂಡಿಬೆಟ್ಟದಲ್ಲಿ ಅಡ್ಡಾಡುವುದೆಂದರೆ ಎಲ್ಲಿಲ್ಲದ ಮಜಾ ನೀಡುತ್ತಿದೆ. ಈ ಬಾರಿಯಂತು ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಇಡೀ ಬೆಟ್ಟ ಹಸಿರು ಹಚ್ಚಡವನ್ನು ಹೊದ್ದು ಕುಳಿತಿದ್ದು ದೂರದಿಂದ ನೋಡಿದರೆ ಈಗಷ್ಟೆ ಮಿಂದೆದ್ದಂತೆ ಭಾಸವಾಗುತ್ತಿದೆ.
ಹಾಗೆನೋಡಿದರೆ ಆಷಾಢ ಮಾಸ ಚಾಮುಂಡೇಶ್ವರಿಗೆ ಜನುಮ ತಿಂಗಳ ಸಂಭ್ರಮದ ಕಾಲವಾಗಿದ್ದು, ಈ ಕಾಲದಲ್ಲಿ ತಾಯಿ ಚಾಮುಂಡೇಶ್ವರಿ ತನ್ನನ್ನು ನೋಡಲು ಬರುವ ಭಕ್ತರಿಗಾಗಿಯೇ ನಿಂತಿದ್ದಾಳೆಯೇನೋ ಎಂಬಂತೆ ಗೋಚರವಾಗುತ್ತಿದೆ. ಕಳೆದ ಎರಡು ವರ್ಷಗಳ ಬಳಿಕ ಆಷಾಢದ ಶುಕ್ರವಾರ ಮತ್ತು ವರ್ಧಂತಿಗೆ ಭಕ್ತರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡಿದ್ದು ವರ್ಧಂತಿ ಹಾಗೂ ಕೊನೆಯ ಆಷಾಢ ಶುಕ್ರವಾರಕ್ಕಾಗಿ ಭಕ್ತರು ಹಾತೊರೆಯುತ್ತಿದ್ದಾರೆ. ಇನ್ನೊಂದೆಡೆ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಚಾಮುಂಡಿಬೆಟ್ಟಕ್ಕೆ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿದೆ.
ಹಾಗೆನೋಡಿದರೆ ಮುಂಜಾನೆ ವಾಯುವಿಹಾರಕ್ಕೆ ಬರುವ ಮೈಸೂರು ನಗರ ವಾಸಿಗಳಿಗೆ ಚಾಮುಂಡಿಬೆಟ್ಟ ಆಕ್ಸಿಜನ್ ಕಣಜ ಇದ್ದಂತೆ. ಹೀಗಾಗಿ ಒಂದೊಳ್ಳೆಯ ಗಾಳಿ, ಮಾನಸಿಕ ನೆಮ್ಮದಿ, ಶರೀರಕ್ಕೆ ವ್ಯಾಯಾಮ, ಕಣ್ಣಿಗೆ ಹಸಿರಿನ ತಂಪು ಪಡೆಯಲು ಬರುವುದು ಸಹಜವಾಗಿದೆ. ನಿತ್ಯ ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯ ದರ್ಶನ ಮಾಡುವವರ ಸಂಖ್ಯೆ ನೂರಾರಿದೆ. ಕಳೆದ ಮೂವತೈದು ವರ್ಷಗಳಿಂದಲೂ ಬೆಟ್ಟವೇರುವವರಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಮೆಟ್ಟಿಲೇರಿ ಚಾಮುಂಡಿದೇವಸ್ಥಾನಕ್ಕೆ ತೆರಳಿ ದೇವರಿಗೆ ನಮಿಸಿ ಹಿಂತಿರುಗುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ಇವರಲ್ಲಿ ಯುವಕ, ಯುವತಿಯರು, ಪುರುಷರು, ವೃದ್ಧರು, ಮಹಿಳೆಯರು ಹೀಗೆ ಎಲ್ಲರೂ ಇದ್ದು, ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೆಟ್ಟಿಲೇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಇವರು ಹೇಳುವ ಪ್ರಕಾರ ಪ್ರತಿದಿನ ಚಾಮುಂಡಿಬೆಟ್ಟ ಹತ್ತುವುದರಿಂದ ಬಿಪಿ, ಶುಗರ್, ನೆಗಡಿ ದೂರವಾಗುತ್ತದೆಯಂತೆ, ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ವೃದ್ಧಿಸುತ್ತದೆಯಂತೆ. ಇನ್ನು ದಿನಾಲೂ ಮೆಟ್ಟಿಲೇರಿದರೆ ಮಂಡಿಚಿಪ್ಪು ಸವೆಯುತ್ತದೆ ಎಂಬ ಮಾತನ್ನು ಇವರಾರು ಒಪ್ಪುವುದಿಲ್ಲ. ವಯಸ್ಸಾದ ಮೇಲೆ ಇದು ಸಹಜ. ಬೆಟ್ಟವೇರಿದಾಕ್ಷಣ ಮಂಡಿ ಚಿಪ್ಪು ಸವೆಯುತ್ತದೆ ಎನ್ನುವುದು ಸುಳ್ಳು ನಾವು ಹತ್ತಾರು ವರ್ಷಗಳಿಂದ ಹತ್ತುತ್ತಿದ್ದು ಅಂತಹ ಸಮಸ್ಯೆ ಎದುರಾಗಿಲ್ಲ ಎಂದು ಹಲವರು ಅಭಿಪ್ರಾಯಪಡುತ್ತಾರೆ.
ವಾರಪೂರ್ತಿ ತಮ್ಮದೇ ಕೆಲಸ ಕಾರ್ಯಗಳ ಜಂಜಾಟದಲ್ಲಿದ್ದವರು ಭಾನುವಾರ ತಮ್ಮ ಕುಟುಂಬ ಅಥವಾ ಸಹದ್ಯೋಗಿಗಳೊಂದಿಗೆ ಬಂದು ನಿಧಾನವಾಗಿ ಒಂದೊಂದೇ ಮೆಟ್ಟಿಲೇರಿ, ಇಲ್ಲಿನ ನಂದಿ ಹಾಗೂ ವ್ಯೂ ಪಾಯಿಂಟ್ ಗಳಲ್ಲಿ ಮೈಸೂರು ನಗರ ಸೇರಿದಂತೆ ದೂರದ ಬೆಟ್ಟಗುಡ್ಡಗಳ ಸುಂದರ ವಿಹಂಗಮ ನೋಟಗಳನ್ನು ನೋಡಿ ಬಳಿಕ ಚಾಮುಂಡೇಶ್ವರಿಯ ದರ್ಶನ ಮಾಡಿ ಮನೆಯ ಹಾದಿ ಹಿಡಿಯುತ್ತಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…
ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೂವರು ಎಂಜಿನಿಯರ್ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್ನ ಎಚ್ಎಸ್ಎಂ ಪ್ಲಾಂಟ್ನಲ್ಲಿ ನಡೆದಿದೆ.
ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಧರ್ಮ ದಂಗಲ್ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…
ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…