ಭಾಷೆ ಎನ್ನುವುದು ಭಾವನೆಯ ಪ್ರತೀಕ, ಸಂಸ್ಕೃತಿಯ ದ್ಯೋತಕ. ಜಗತ್ತಿನ ಪ್ರತೀ ಭಾಷೆಯೂ ಕೂಡ ತನ್ನದೇ ಆದಂತಹ ಪರಂಪರೆ, ಆಚರಣೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊಂದಿದೆ.
ದ್ರಾವಿಡ ಭಾಷೆಗಳಲ್ಲಿ ಪುರಾತನ ಭಾಷೆ ಎಂದು ಗುರುತಿಸಲ್ಪಡುವ ಕನ್ನಡ ಆದಿಘಟ್ಟದಿಂದಲೂ ಹೊಸತನಗಳಿಗೆ ಬದಲಾಗುತ್ತಾ, ಹಲವಾರು ಸಾಮಾಜಿಕ ಪರಿವರ್ತನೆಗಳಿಗೆ ಕಾರಣವಾಗುತ್ತಾ ಸಾಗಿ ಬಂದಿದೆ. ಕನ್ನಡ ಸಾಹಿತ್ಯವನ್ನು ಜಗತ್ತು ಅಧ್ಯಯನ ಮಾಡುವಂತಹ ಮಹಾನ್ ಕೃತಿಗಳನ್ನು ಸಾವಿರಾರು ಸಾಹಿತ್ಯ ಸಂತರು ನೀಡಿದ್ದಾರೆ. ಅಕ್ಷರಗಳಲ್ಲಿ ದಾಖಲಾಗದೆ ಉಳಿದಿರುವ ಜನಪದ ಕಲಾ ಜಗತ್ತು ಇಂದಿಗೂ ಒಂದು ವಿಸ್ಮಯ.
ಆಧುನಿಕ ಕಾಲಘಟ್ಟದಲ್ಲಿ, ಜಾಗತೀಕರಣದ ದಾಳಿಯಲ್ಲಿ ನಲುಗಿ ಹೋಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡವೂ ಇದೆ ಎನ್ನುವುದು ನೋವಿನ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಭಾಷೆಯನ್ನು ಉಳಿಸುವ, ಬೆಳೆಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.
ತಂತ್ರಜ್ಞಾನ ಆಧರಿತ ಸಂವಹನ ವ್ಯವಸ್ಥೆಯಲ್ಲಿ ನಮ್ಮ ಭಾಷೆಯನ್ನು ಸಮರ್ಪಕವಾಗಿ ಬಳಸುವ ಅವಕಾಶಗಳಿದ್ದರೂ, ಬಳಕೆಯ ಕೊರತೆ, ಮಾತೃ ಭಾಷೆಯ ಕುರಿತಾಗಿ ಒಲವಿಲ್ಲದಿರುವುದು, ಇಂಗ್ಲೀಷ್ ವ್ಯಾಮೋಹ ಮುಂತಾದ ಕಾರಣಗಳು ಕನ್ನಡ ಬಳಕೆಯನ್ನು ಸೀಮಿತಗೊಳಿಸುತ್ತಿವೆ.
ಕನ್ನಡ ಕೇವಲ ಭಾಷೆಯಾಗಿ ಉಳಿಯದೆ, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಗುರುತಿಸಬೇಕಾಗಿದೆ. ಅಕ್ಷರರೂಪದಲ್ಲಿರುವ ನಮ್ಮ ಸಾಂಸ್ಕೃತಿಕ, ಸಾಮಾಜಿಕ, ಭವ್ಯ ಪರಂಪರೆಯನ್ನು ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ಜಗತ್ತಿಗೆ ತೆರೆದಿಡಬೇಕಾದ ಮುಖ್ಯ ಕಾರ್ಯ ಆಗಬೇಕಾಗಿದೆ. ಗಣಕ ಪರಿಷತ್ತು ಈ ನಿಟ್ಟಿನಲ್ಲಿ ಸಕ್ರೀಯವಾಗಬೇಕಾಗಿರುವುದು ಇಂದಿನ ಅವಶ್ಯ. ಜೊತೆಯಲ್ಲಿ ಗೂಗಲ್, ಫೇಸ್ಬುಕ್ ಮುಂತಾದ ಅಂತರಾಷ್ಟ್ರೀಯ ಕಂಪನಿಗಳು ಸ್ಥಳೀಯ ಭಾಷೆಗೆ ಪ್ರಾತಿನಿದ್ಯ ನೀಡುತ್ತಿದ್ದು, ನಾವು ಪ್ರತಿದಿನ ಬಳಸಿದಾಗ, ಅವು ಪರಿಪಕ್ವವಾಗಬಲ್ಲದು. ತಮಿಳು, ತೆಲುಗು, ಮಲಯಾಳಂ ಭಾಷೆಗೆ ಹೋಲಿಸಿದರೆ, ತಂತ್ರಜ್ಞಾನ ಬಳಕೆಯಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಾಗಿದೆ.
ಸರ್ಕಾರದ ಯಾವುದೇ ಪ್ರಾಯೋಜಕತ್ವ ಇಲ್ಲದೆ, ‘ಪದ’ ಮುಂತಾದ ತಂತ್ರಾಂಶಗಳು ಉತ್ತಮ ಫಲಿತಾಂಶ ನೀಡುತ್ತಿದ್ದು, ಅಂತಹ ಯೋಜನೆಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಕಾರ್ಯೋನ್ಮುಖವಾದರೆ ಕನ್ನಡದ ಅಸ್ಮಿತೆಯನ್ನು ಖಂಡಿತವಾಗಿಯೂ ಉಳಿಸಬಹುದು.
ಭಾಷಾವಾರು ಪ್ರಾಂತ್ಯಗಳನ್ನು ರಾಜ್ಯಗಳನ್ನಾಗಿ ಗುರಿತಿಸಿದ ನೆನಪಿನಲ್ಲಿ ಇವಿಷ್ಟನ್ನು ಹಂಚಿಕೊಳ್ಳಬೇಕಾಯಿತು.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು…