ನವದೆಹಲಿ: ಭಾರತೀಯ ವಾಯುಪಡೆಯ ದಿನಾಚರಣೆಯನ್ನು ಪ್ರತಿವರ್ಷ ಅಕ್ಟೋಬರ್ 8ರಂದು ಆಚರಿಸಲಾಗುತ್ತದೆ. ಈ ದಿನ 1932ರಂದು ಭಾರತೀಯ ವಾಯುಪಡೆ (ಐಎಎಫ್) ಅನ್ನು ಸ್ಥಾಪಿಸಿದ ದಿನದ ನೆನಪಿಗೆ ಭಾರತೀಯ ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ವಾಯುಪಡೆ ಭಾರತದ ಸೇನಾಪಡೆಗಳ ವಾಯು ವಿಭಾಗವಾಗಿದ್ದು, ಭಾರತದ ವಾಯುಪ್ರದೇಶವನ್ನು ಸುರಕ್ಷಿತವಾಗಿಡಲು ಮತ್ತು ಯುದ್ಧದ ಸಂದರ್ಭದಲ್ಲಿ ವಾಯುದಾಳಿಗಳನ್ನು ನಡೆಸಲು ಬಳಕೆಯಾಗುತ್ತದೆ. ಭಾರತೀಯ ವಾಯುಪಡೆ ತನ್ನ ಮಾನವೀಯ ಕಾರ್ಯಾಚರಣೆಗಳು ಮತ್ತು ವಿಕೋಪ ಪರಿಹಾರ ಕಾರ್ಯಾಚರಣೆಗಳಿಗಾಗಿ ಹೆಸರಾಗಿದೆ. ಅದರೊಡನೆ, ಭಾರತೀಯ ವಾಯುಪಡೆ ಹಲವಾರು ಶಾಂತಿಸ್ಥಾಪನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ.
ಇನ್ನು ಇಂದುಭಾರತೀಯ ವಾಯುಪಡೆ ದಿನಾಚರಣೆ (ಅ.08) ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಸಲ್ಲಿಸಿದ್ದಾರೆ.
ವಾಯುಪಡೆ ದಿನಾಚರಣೆಯಂದು ನಮ್ಮೆಲ್ಲ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಸದಾ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವ ಬಲಿಷ್ಠ, ಧೈರ್ಯ ಮತ್ತು ಕ್ರಿಯಾಶೀಲ ವಾಯುಪಡೆ ಹೊಂದಿರುವುದಕ್ಕೆ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುತ್ತದೆ. ಆಕಾಶದ ರಕ್ಷಣೆ ಮಾತ್ರವಲ್ಲದೆ ಮಾನವೀಯ ನೆಲೆಯಲ್ಲಿ ನೆರವಾಗಲು ವಾಯುಪಡೆ ಸದಾ ಮುಂಚೂಣಿಯಲ್ಲಿದೆ. ನಮ್ಮೆಲ್ಲ ಯೋಧರಿಗೆ ವಂದನೆಗಳು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
“ವಾಯುಪಡೆಯ ದಿನಾಚರಣೆಯಂದು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ. ವಾಯುಪಡೆಯ ಶೌರ್ಯ, ಬದ್ಧತೆ ಮತ್ತು ಸಮರ್ಪಣೆಯ ಬಗ್ಗೆ ಇಡೀ ದೇಶ ಹೆಮ್ಮೆಪಟ್ಟುಕೊಳ್ಳುತ್ತದೆ. ಅವರ ತ್ಯಾಗ ಹಾಗೂ ಸೇವೆಯಿಂದ ನಮ್ಮ ಆಕಾಶವು ಸುರಕ್ಷಿತವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತವನ್ನು ಸುರಕ್ಷಿತವಾಗಿರಿಸಲು ವಾಯುಪಡೆಯ ಕೊಡುಗೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ಮರಿಸಿದ್ದಾರೆ. ಭಾರತದ ವಾಯುಪಡೆಯು ಜಗತ್ತಿನ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಉಲ್ಲೇಖಿಸಿದ್ದಾರೆ.