ಮಹಾಶಿವರಾತ್ರಿ ಹಿನ್ನಲೆಯಲ್ಲಿ ಶಿವದೇಗುಲಗಳಲ್ಲಿ ವಿಶೇಷ ಪೂಜೆ, ಜಾಗರಣಗಳು ನಡೆಯುತ್ತಿದ್ದು, ಅದರಲ್ಲೂ ನಿಸರ್ಗ ನಿರ್ಮಿತ ಉದ್ಭವ ಶಿವಲಿಂಗ ಹೊಂದಿರುವ ಶಿಲಾದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ರಾತ್ರಿ ಪೂರ್ತಿ ಜಾಗರಣೆಗಳು ನಡೆಯುತ್ತಿವೆ. ಇಂತಹ ಶಿಲಾದೇಗುಲಗಳು ಕೆಲವೇ ಕೆಲವು ಇದ್ದು ಆ ಪೈಕಿ ಕೊಡಗಿನ ಹುಲಿತಾಳದ ಬೊಟ್ಲಪ್ಪ ದೇಗುಲ ಗಮನಸೆಳೆಯುತ್ತದೆ.
ಮಡಿಕೇರಿಯಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಹೆಬ್ಬಂಡೆಗಳು ಒಂದಕ್ಕೊಂದು ಆಧಾರವಾಗಿ ನಿಂತ ಬಂಡೆ ನಡುವೆ ದೇಗುಲ ನಿರ್ಮಾಣವಾಗಿದ್ದು, ಈ ದೇಗುಲವನ್ನು ಸ್ಥಳೀಯರು ಬೊಟ್ಲಪ್ಪ ಎಂದು ಕರೆಯುತ್ತಾರೆ. ಈಶ್ವರ ಇಲ್ಲಿನ ಆರಾಧ್ಯ ದೈವನಾಗಿದ್ದಾನೆ. ಜನರ ಸದ್ದುಗದ್ದಲದಿಂದ ದೂರವಾಗಿ ಸದಾ ಪ್ರಶಾಂತ ತಾಣದಲ್ಲಿ ಈ ದೇಗುಲವಿದೆ. ಹಿಂದೆ ಈ ಪ್ರದೇಶ ದಟ್ಟ ಕಾಡಿನಿಂದ ಕೂಡಿತ್ತಾದರೂ ಈಗ ಸುತ್ತ ಮುತ್ತಲ ಪ್ರದೇಶಗಳಲ್ಲಿ ಜನರು ವಾಸಿಸುತ್ತಿದ್ದಾರೆ.
ಈ ದೇಗುಲದ ಬಗೆಗೆ ತಿಳಿಯುತ್ತಾ ಹೋದರೆ ಹಿಂದೆ ಕೊಡಗನ್ನು ಆಳುತ್ತಿದ್ದ ರಾಜ ಬೇಟೆಯಾಡುವ ಸಲುವಾಗಿ ದಟ್ಟ ಕಾಡಿನಿಂದ ಕೂಡಿದ್ದ ಈ ಸ್ಥಳಕ್ಕೆ ಬಂದಿದ್ದನಂತೆ ಆಗ ಘರ್ಜಿಸುತ್ತಾ ಬಂದ ಹುಲಿಯೊಂದು ಈ ಶಿಲಾ ದೇಗುಲದ ಬಳಿ ಮಂಡಿಯೂರಿ ನಮಿಸಿ ಮುಂದೆ ಸಾಗಿತ್ತಂತೆ ಇದನ್ನು ಗಮನಿಸಿದ ರಾಜ ಈ ಸ್ಥಳದಲ್ಲಿ ಏನೋ ಮಹಿಮೆಯಿದೆ ಎಂದು ಅಲ್ಲಿಗೆ ತೆರಳಿ ನೋಡಿದಾಗ ಹೆಬ್ಬಂಡೆಗಳ ನಡುವೆ ಉದ್ಭವ ಲಿಂಗ ಕಂಡಿತಂತೆ. ಕೂಡಲೇ ಅರ್ಚಕರನ್ನು ನೇಮಿಸಿ ನಿತ್ಯವೂ ಪೂಜೆ ಮಾಡುವ ವ್ಯವಸ್ಥೆ ಮಾಡಿದನಂತೆ. ಅಂದಿನಿಂದ ಇಂದಿನವರೆಗೂ ಇಲ್ಲಿ ಪೂಜಾ ಕಾರ್ಯ ನಡೆಯುತ್ತದೆ.
ಈ ತಾಣದಲ್ಲಿ ಹಿಂದೆ ಋಷಿ ಮುನಿಗಳು ತಪ್ಪಸ್ಸು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಎಡಬದಿಯ ಬಂಡೆಯ ತಳಭಾಗದಲ್ಲಿ ಗುಹೆಯೊಂದನ್ನು ಕಾಣಬಹುದಾಗಿದ್ದು, ಇದು ಹುಲಿಯ ವಾಸಸ್ಥಾನವೆಂಬ ನಂಬಿಕೆಯೂ ಇದೆ. ಬಹುಶಃ ಹಿಂದೆ ಹುಲಿಯ ವಾಸಸ್ಥಾನವಾಗಿದ್ದ ಹುಲಿತಾಣ ಕ್ರಮೇಣ ಹುಲಿತಾಳವಾಗಿರಬಹುದೇನೋ?
ಇಲ್ಲಿಗೆ ತೆರಳಬೇಕೆಂದರೆ ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಹೊರಟರೆ ಸುಮಾರು ಎಂಟು ಕಿ.ಮೀ. ದೂರದಲ್ಲಿ ಕಡಗದಾಳು ಸಿಗುತ್ತದೆ. ಅಲ್ಲಿಂದ ಬಲಕ್ಕೆ ಕಗ್ಗೋಡ್ಲು ಕಡೆಗಿನ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಮತ್ತೆ ಎಡಕ್ಕೆ ತಿರುಗಬೇಕು ಹೀಗೆ ಸುಮಾರು ಎರಡು ಕಿ.ಮೀ.ನಷ್ಟು ಸಾಗಿದರೆ ಹುಲಿತಾಳದ ಶಿಲಾದೇಗುಲವನ್ನು ತಲುಪಬಹುದು. ಇಲ್ಲಿ ಪ್ರತಿದಿನ ಪೂಜೆ ನಡೆಯುತ್ತವೆಯಾದರೂ ಶಿವರಾತ್ರಿಯಂದು ವಿಶೇಷ ಪೂಜೆ, ಅಭಿಷೇಕ, ಜಾಗರಣೆಗಳು ನಡೆಯುವುದು ವಿಶೇಷವಾಗಿದೆ.