ಸಾಮಾನ್ಯವಾಗಿ ಯುವತಿಯರು ಕೂದಲಿನ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಏಕೆಂದರೆ ಕೂದಲು ಸೌಂದರ್ಯದ ಸಂಕೇತ ಎಂದರೆ ತಪ್ಪಾಗದು. ಆದರೆ ಇಂದು ಯುವ ಪೀಳಿಗೆಗೆ ಕೂದಲಿನ ಸಮಸ್ಯೆ ಅಗಾಧವಾಗಿ ಕಾಡುತ್ತಿದೆ. ಕೂದಲು ಉದುರುವುದು, ಕೂದಲ ತುದಿ ಎರಡು ಭಾಗವಾಗುವುದು ಹೀಗೆ ಹಲವಾರು ಸಮಸ್ಯೆಯನ್ನು ಇಂದಿನ ಯುವ ಪೀಳಿಗೆ ಅನುಭವಿಸುತ್ತಿದೆ. ಇಂತಹ ಸಮಸ್ಯೆಯಿಂದ ದೂರಾಗಿ ಕೂದಲು ಉತ್ತಮ ಹೊಳಪು ಮತ್ತು ಪೋಷಣೆ ಪಡೆದು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುವಂತೆ ಮಾಡಲು ಇಲ್ಲಿದೆ ಕೆಲವು ಸಲಹೆಗಳು.
ಕೂದಲು ಉದುರುವಿಕೆಯನ್ನು ತಡೆಯಲು ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಕೂದಲಿನ ಹೇರ್ ಪ್ಯಾಕ್ನಂತೆ ಬಳಸಿ, ಕೆಲವು ನಿಮಿಷ ಹಾಗೆಯೇ ಬಿಡಿ ನಂತರ ಇದನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.
ತೆಂಗಿನ ಎಣ್ಣೆಗೆ ತುಳಸಿಯ ಪೇಸ್ಟ್ ಅನ್ನು ಸೇರಿಸಿ ಮತ್ತು ಮಸಾಜ್ ಮಾಡಿಕೊಳ್ಳಿ ಇದು ಡ್ಯಾಂಡ್ರಫ್ ಅನ್ನು ನಿವಾರಿಸುತ್ತದೆ.
ತುಳಸಿ ಎಲೆಗಳನ್ನು ನೆಲ್ಲಿಕಾಯಿ ಪೌಡರ್ನೊಂದಿಗೆ ಮಿಶ್ರನ ಮಾಡಿ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ರಾತ್ರಿ ಇದನ್ನು ಹಚ್ಚಿ ಮತ್ತು ಈ ಪ್ಯಾಕ್ ಅನ್ನು ಹಾಗೆಯೇ ಬಿಡಿ. ಬೆಳಗ್ಗೆ ಎಂದಿನಂತೆ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಇದು ಕೂದಲುದುರುವುದನ್ನು ತಡೆಯುತ್ತದೆ ಮತ್ತು ಕೂದಲು ತುಂಡಾಗುವುದನ್ನು ಕಡಿಮೆ ಮಾಡುತ್ತದೆ ಹಾಗೆಯೇ ಸೀಳು ಕೂದಲನ್ನು ನಿವಾರಣೆ ಮಾಡುತ್ತದೆ.
ತಲೆಹೊಟ್ಟು ನಿವಾರಣೆಗ, ತುಳಸಿ ಎಲೆಯನ್ನು ನೀರು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ತುಳಸಿ ಪೇಸ್ಟ್ ನ್ನು ನೆತ್ತಿಯ ಭಾಗ ಹಾಗೂ ಕೂದಲಿನ ಬುಡಗಳಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ತಣ್ಣೀರಿನಲ್ಲಿಯೇ ಕೇಶವನ್ನು ತೊಳೆಯಿರಿ. ಹೀಗೆ ಕ್ರಮೇಣ ಮಾಡಿ.