ಇತ್ತೀಚೆಗೆ ಆಹಾರದ ವಿಚಾರದಲ್ಲಿ ಡಯಟ್ ಎನ್ನುವುದು ಸಾಮಾನ್ಯವಾಗಿದೆ. ತಮ್ಮ ಆಹಾರ ಪದ್ಧತಿಗಳನ್ನು ತಾವೇ ನಿರ್ಧರಿಸಿ ಅದನ್ನು ರೂಡಿಸಿಕೊಂಡು ಹೋಗುವುದು ಕಾಣುತ್ತಿದ್ದೇವೆ.
ಆದರೆ ನಮ್ಮ ಆಹಾರ ಪದ್ಧತಿಯು ಎಲ್ಲಾ ಕಾಲಕ್ಕೂ ಒಂದೇ ತೆರನಾಗಿ ಇರುವುದು ಆರೋಗ್ಯ ದೃಷ್ಟಿಯಲ್ಲಿ ಯೋಚಿಸುವುದಾದರೆ ಒಳ್ಳೆಯದಲ್ಲ.
ಉದಾಹರಣೆಗೆ ಚಳಿಗಾಲದಲ್ಲಿ ನಮ್ಮ ಆಹಾರ ಪದ್ಧತಿಯು ಹವಾಗುಣಕ್ಕೆ ಸರಿಯಾಗಿ ಇರಬೇಕು. ಅತಿಯಾಗಿ ಉಷ್ಣ ಯುತ ಆಹಾರಗಳನ್ನು ಈ ಸಂದರ್ಭದಲ್ಲಿ ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶವು ಹೆಚ್ಚಾಗುವ ಸಾಧ್ಯತೆ ಇರುತ್ತವೆ. ಹವಾಗುಣಕ್ಕೆ ಸರಿ ಹೊಂದಿಕೊಂಡು ನಮ್ಮ ಆಹಾರ ಪದ್ಧತಿಯನ್ನು ಪಾಲಿಸಬೇಕು ಎಂದು ಕಾಕುಂಜೆ ಆಯುರ್ವೇದ ವೆಲ್ ನೆಸ್ ವೈದ್ಯೆ ಡಾ.ಅನುರಾಧ ಅವರು ಹೇಳುತ್ತಾರೆ.
ಒಬ್ಬ ಮನುಷ್ಯ ಆರೋಗ್ಯಯುತವಾಗಿ ಇರುವುದು ಎಂದರೆ ಆತನಿಗೆ ಸರಿಯಾದ ಉತ್ತಮವಾದ ನಿದ್ರೆ ಅದೇ ರೀತಿ ತಿನ್ನುವಂತ ಆಹಾರದ ಜೀರ್ಣ ಕ್ರಿಯೆ ಯಾವ ರೀತಿಯಲ್ಲಿ ಇವೆ ಎನ್ನುವುದನ್ನು ಅವಲಂಬಿಸಿ ಇರುತ್ತದೆ.
ಯಾವುದೇ ಕೆಲಸಗಳನ್ನು ಮಾಡುವ ಉತ್ಸಾಹ ಇರುವುದು ಕೂಡ ಆರೋಗ್ಯಯುತ ದೇಹದ ಲಕ್ಷಣಗಳು ಆಗಿವೆ. . ಅದೇ ರೀತಿ ರಾತ್ರಿ ನಿದ್ರೆ ಬರದೇ ಇರುವುದು ನಡುನಡುವೆ ಎಚ್ಚರವಾಗುವುದು ಇಂತಹ ಸಮಸ್ಯೆ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಇವೆ ಇಂದು ತಿಳಿದುಕೊಳ್ಳಬೇಕು.
ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿ ಯಾವುದೇ ರೀತಿಯ ಜಡವಿಲ್ಲದೆ ಉಲ್ಲಾಸಭರಿತ ವಾಗಿ ಎಚ್ಚರವಾದರೆ ಇದು ಆರೋಗ್ಯಯುತ ದೇಹದ ಲಕ್ಷಣವಾಗಿದೆ ಇಂತಹ ದೇಹದ ಸ್ಥಿತಿಗೆ ಹೊಂದಿಕೊಂಡು ಇರುವವರು ಚಳಿಗಾಲದಲ್ಲಿ ಕೂಡ ಸಿಹಿ ತಿಂಡಿಗಳನ್ನು ಸೇವಿಸಬಹುದು ಅದೇ ರೀತಿ ಚಳಿಗಾಲದಲ್ಲಿ ಧಾರಾಳವಾಗಿ ಆಹಾರಗಳನ್ನು ಸೇವನೆ ಮಾಡಬಹುದು. ನಮ್ಮ ದೇಹದ ಜೀರ್ಣಕ್ರಿಯೆಗೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿ ಇರಬೇಕು ಎನ್ನುತ್ತಾರೆ ಡಾ. ಅನುರಾಧ.
ಮುಂದೆ ವಸಂತ ಋತು,ಈ ಋತುವಿನಲ್ಲಿ ಕಫದ ಸಮಸ್ಯೆಯು ಎದುರಾಗುವ ಸಾಧ್ಯತೆ ಇರುತ್ತದೆ. ಕಫ ದ ಸಮಸ್ಯೆಯೆಂದರೆ ಕೇವಲ ಕೆಮ್ಮು ನೆಗಡಿಯಿಂದ ಬರುವುದಲ್ಲ. ಬದಲಾಗಿ ವಾತ ಪಿತ್ತ ಕಫ ಎನ್ನುವ ದೋಷ ಗಳಲ್ಲಿ ಒಂದಾದ ಕಫದ ಸಮಸ್ಯೆಯ ಲಕ್ಷಣ ಎಂದರೆ ಆಲಸ್ಯದಿಂದ ಕೂಡಿರುವ ದೇಹ ತೂಕ ಹೆಚ್ಚಾಗುವುದು. ಆದರಿಂದ ಈ ವಸಂತ ಋತುವಿನಲ್ಲಿ ಜೀರ್ಣಕ್ರಿಯೆಗೆ ಸಹಾಯವಾಗುವಂತೆ ನಮ್ಮ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಅತಿಯಾಗಿ ನೀರು ಸೇವಿಸುವುದು ಕೂಡ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಅದೇರೀತಿ ಸಂದರ್ಭದಲ್ಲಿ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿರಬೇಕು. ಕಫ ವನ್ನು ಉಂಟುಮಾಡುವಂತಹ ಮಧುರ ಪದಾರ್ಥಗಳು ಅದೇ ರೀತಿ ಮೊಸರು ಸೇವಿಸುವುದರಿಂದ ದೂರವಿರುವುದು ಉತ್ತಮ.
ಅದೇ ರೀತಿ ಈ ಋತುವಿನಲ್ಲಿ ಮಧ್ಯಾಹ್ನದ ಊಟದ ಬಳಿಕ ತುಂಬ ಹೊತ್ತು ಗಳ ಕಾಲ ನಿದ್ರಿಸುವುದು ಕೂಡ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಕೇವಲ ಹತ್ತು ನಿಮಿಷಗಳಷ್ಟು ಕಾಲ ನಿದ್ರಿಸಿದರೆ ಸಾಕಾಗುತ್ತದೆ ಎನ್ನುತ್ತಾರೆ.
ಮುಂದೆ ಗ್ರೀಷ್ಮ ಋತು ಅಂದರೆ ಬೇಸಿಗೆಕಾಲ ಈ ಸಂದರ್ಭದಲ್ಲಿ ನಮ್ಮ ಆಹಾರಪದ್ಧತಿಯಲ್ಲಿ ಬಹಳ ಈ ಸಂದರ್ಭದಲ್ಲಿ ನಾವು ನಮ್ಮ ಸುತ್ತಮುತ್ತಲಿನ ಪರಿಸರವು ಒಣಗಿ ಹೋಗಿರುವುದನ್ನು ಕಾಣುತ್ತೇವೆ ಅದೇ ರೀತಿ ನಮ್ಮ ದೇಹವು ಕೂಡ ಉಷ್ಣ ಯುತವಾಗಿ ಗ್ರೀಷ್ಮ ಋತುವಿನಲ್ಲಿ ಇರುತ್ತವೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮಸಾಲೆ ಮಜ್ಜಿಗೆ ಮಸಾಲೆಯುಕ್ತ ತಿಂಡಿಗಳನ್ನು ಸೇವಿಸುವುದು ಕಾಣುತ್ತೇವೆ. ಇದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ . ಇಂತಹ ಆಹಾರದ ಬದಲು ಪುನರ್ಪುಳಿ ಜ್ಯೂಸ್ ನನ್ನಾರಿ ಬೇರಿನ ಶರಬತ್ತು ಕುಡಿಯಬಹುದು. ಅದೇ ರೀತಿ ಸಂದರ್ಭದಲ್ಲಿ ಮಧುರಯುತ ಪದಾರ್ಥಗಳನ್ನು ಸೇವಿಸಬೇಕು ಆದರೆ ಅದನ್ನು ಕೂಡ ಒಂದು ಮಿತಿಯಲ್ಲಿ ಸೇವಿಸಬೇಕು.
ಮುಂಬರುವ ಮಳೆಗಾಲದಲ್ಲಿ ವಾತದ ಸಮಸ್ಯೆ ಕಾಣಿಸಿಕೊಳ್ಳಬಹುದು ಆದ್ದರಿಂದ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ನಮ್ಮ ಜೀರ್ಣಕ್ರಿಯೆಯೂ ದುರ್ಬಲವಾಗಿರುತ್ತವೆ. ಎದೆ ಉರಿ ತೇಗು ಹೊಟ್ಟೆ ಉಬ್ಬರದ ಸಮಸ್ಯೆ ಎದುರಾಗುತ್ತವೆ. ವಾತ ಮತ್ತು ಪಿತ್ತದ ಸಮಸ್ಯೆ ಹೆಚ್ಚಾಗುವುದು ಸಂದರ್ಭದಲ್ಲಿ ಸಾಮಾನ್ಯವಾಗಿದೆ ಆದ್ದರಿಂದ ಅವುಗಳನ್ನು ನಿಯಂತ್ರಿಸುವಂತಹ ಆಹಾರ ಪದಾರ್ಥಗಳನ್ನು ಈ ಋತುವಿನಲ್ಲಿ ಸೇವಿಸಬೇಕು. ಹುರುಳಿಕಾಳಿನ ಸಾರು.(ಇದು ಪಿತ್ತಪ್ರಕೃತಿ ಇರುವ ದೇಹಕ್ಕೆ ಒಳ್ಳೆಯದಲ್ಲ).ಆದ್ದರಿಂದ ನಮ್ಮ ಆಹಾರ ಪದ್ಧತಿ ಹವಾಗುಣಕ್ಕೆ ಋತುವಿಗೆ ಅನುಗುಣವಾಗಿ ಇದ್ದರೆ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.