ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ಜಗತ್ತಿನಲ್ಲಿಯೇ ವಿಖ್ಯಾತಿಯನ್ನು ಪಡೆದಿದೆ. ದಿನಾಲೂ ನೂರಾರು ಪ್ರವಾಸಿಗರು ಈ ಸ್ಥಳವನ್ನು ವೀಕ್ಷಿಸಲು ಬರುತ್ತಾರೆ. ಇದಕ್ಕೆ ತೀರ ಹತ್ತಿರದಲ್ಲಿರುವ ವಡನಬೈಲು ಧಾರ್ಮಿಕ ಕ್ಷೇತ್ರ ಕೂಡ ಸಾಕಷ್ಟು ಖ್ಯಾತಿಯನ್ನು ಹೊಂದಿದೆ.
ವಡನವೈಲು ಜೋಗದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ ಪ್ರಾಚೀನವಾದ ಪದ್ಮಾವತಿ ಅಮ್ಮನವರ ದೇವಸ್ಥಾನವಿದೆ. ಇದು ಬಹಳ ಶಕ್ತಿಯುಳ್ಳ ದೇವಸ್ಥಾನವೆಂಬುದು ಇಲ್ಲಿನ ಜನರ ನಂಬಿಕೆ.
ಇಲ್ಲಿನ ಪದ್ಮಾವತಿ ದೇವಿಯ ವಿಗ್ರಹಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ ಹಾಗೆ ಇನ್ನು ಕೆಲವರ ಪ್ರಕಾರ ಇದು ವಿಜಯನಗರ ಕಾಲದ್ದು ಎಂದೂ ಹೇಳುತ್ತಾರೆ. ವಡನಬೈಲಿನಲ್ಲಿ ಈ ವಿಗ್ರಹ ಸ್ಥಾಪನೆಯಾಗುವ ಮೊದಲು ಪದ್ಮಾವತಿ ದೇವಿ ಹೆಬೈಲಿನಲ್ಲಿ ನೆಲೆಸಿದ್ದಳು, ಆದರೆ ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ವೇಳೆಯಲ್ಲಿ ಈ ವಿಗ್ರಹವನ್ನು ವಡನಬೈಲಿಗೆ ಸ್ಥಳಾಂತರಿಸಲಾಯಿತು.
ಲಿOಗನಮಕ್ಕಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ದೇವಿಗೆ ಪೂಜೆಯನ್ನು ನಿಲ್ಲಿಸಲಾಗಿತ್ತು, ಬಳಿಕ ದೇವಸ್ಥಾನದ ವಂಶಸ್ಥ ವೀರ ರಾಜಯ್ಯ ಜೈನ್ ಅವರಿಗೆ ಕನಸಿನಲ್ಲಿ ಬಂದ ದೇವಿ ತನ್ನ ಪೂಜೆಯನ್ನು ಮುಂದುವರೆಸುವOತೆ ಸೂಚನೆಯನ್ನು ನೀಡುತ್ತಾಳೆ. ಆಗ ವೀರ ರಾಜಯ್ಯ ಜೈನ್ ಅವರು, ಮೊದಲಿನ ಹಾಗೆ ನಿನ್ನ ವಿಗ್ರಹದ ಸುತ್ತ ಹುತ್ತ ಬೆಳೆದರೆ ಮಾತ್ರ ತಾವು ಪೂಜೆ ಮಾಡುವುದಾಗಿ ಪದ್ಮಾವತಿ ದೇವಿಯ ಬಳಿ ಹೇಳುತ್ತಾರೆ. ಇದಾದ ಮರುದಿನವೇ ದೇವಿಯ ಮೂರ್ತಿ ಸುತ್ತ ಸುಮಾರು 12 ಅಡಿಯ ಹುತ್ತ ನಿರ್ಮಾಣವಾಗುತ್ತದೆ.
ಪ್ರತಿ ನಿತ್ಯ ದೇವಿಯ ದರ್ಶನಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ತೀರ್ಥದಲ್ಲಿ ಹುತ್ತದ ಮಣ್ಣು ಹಾಕಿ ಕೊಡುವುದರಿಂದ ಬಹಳಷ್ಟು ಜನರಿಗೆ ಚರ್ಮ ಸಂಬAಧಿ ಖಾಯಿಲೆಗಳು ಗುಣವಾದ ಉದಾಹರಣೆಗಳನ್ನು ಕಾಣಬಹುದಾಗಿದೆ. ಹಾಗೆ ಮಕ್ಕಳಿಲ್ಲದವರು ಸಂತಾನ ಪ್ರಾಪ್ತಿಗಾಗಿ ಬರುವುದುಂಟು. ಇಲ್ಲಿಗೆ ಬಂದು ದೇವಿಗೆ ಹರಕೆ ಕಟ್ಟಿಕೊಂಡರೆ ಮಕ್ಕಳಾಗುವುದು ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ. ಅಲ್ಲದೇ ದೇವಿಗೆ ಬಳೆಗಳೆಂದರೆ ಪ್ರಿಯವಾಗಿರುವುದರಿಂದ ಬರುವ ಭಕ್ತರು ಪದ್ಮಾವತಿ ದೇವಿಗೆ ಬಳೆಗಳನ್ನು ಕಾಣಿಕೆಯಾಗಿ ತರುತ್ತಾರೆ. ಆ ಬಳೆಗಳನ್ನು ದೇವಿಯ ಸುತ್ತ ಇಡಲಾಗುತ್ತದೆ. ಇನ್ನು ಆ ಬಳೆಗಳನ್ನೇ ಪ್ರಸಾದವಾಗಿ ಬರುವ ಭಕ್ತರಿಗೆ ಕೊಡುತ್ತಾರೆ, ಬಳೆಗಳನ್ನು ಸ್ವೀಕರಿಸುವ ಭಕ್ತರು ತಮ್ಮ ಮನೆಗಳಲ್ಲಿ ಅವುಗಳನ್ನು ಇರಿಸಿ ಪೂಜೆ ಮಾಡುತ್ತಾರೆ.
ಇಲ್ಲಿಗೆ ಬರುವ ಭಕ್ತರೊಬ್ಬರು ಹೇಳುವ ಹಾಗೆ, ಆಕೆಗೆ ಹೆರಿಗೆ ಸಮಯದಲ್ಲಿ ಸಮಸ್ಯೆ ಎದುರಾದಾಗ ಈ ದೇವಿಗೆ ಹರಸಿಕೊಂಡ ಕಲವೇ ನಿಮಿಷದಲ್ಲಿ ಯಾವುದೇ ತೊಂದರೆ ಇಲ್ಲದೇ ಹೆರಿಗೆ ಆಯಿತು ಎಂದು ಹೇಳಿದರು.
ಈ ಕ್ಷೇತ್ರದಲ್ಲಿ 7 ಅಡಿ 7 ಇಂಚು ಎತ್ತರದ,7 ಹೆಡೆಯ ಹಾಗೂ 77 ಕ್ವಿಂಟಾಲ್ ತೂಕವನ್ನು ಹೊಂದಿರುವ ಮುಕ್ತಿನಾಗರ ಮೂರ್ತಿ ಇದೆ. ಈ ವಿಗ್ರಹಕ್ಕೆ 108 ಬಾರಿ ಪ್ರದಕ್ಷಿಣೆ ಹಾಕಿದರೆ ನಾಗದೋಷ ಪರಿಹಾರವಾಗುವುದು ಎಂದು ಹೇಳುತ್ತಾರೆ.
ಕೇವಲ ಜನಸಾಮಾನ್ಯರಷ್ಟೇ ಅಲ್ಲದೇ ಇಲ್ಲಿನ ದೇವಸ್ಥಾನ ಹಲವು ರಾಜಕಾರಣಿಗಳ ಭವಿಷ್ಯವನ್ನು ಉಜ್ವಲಗೊಳಿಸಿದೆ. ರಾಜ್ಯದ ಪ್ರಮುಖ ರಾಜಕೀಯ ನಾಯಕರೊಬ್ಬರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದ್ದರು. ಅದು ಸಾಕಾರಗೊಳ್ಳುತ್ತಿದ್ದಂತೆ ತಮ್ಮ ತೂಕದಷ್ಟು (ಅಂದಾಜು 82ಕೆಜಿ) ಬಳೆಗಳನ್ಮು ಇಟ್ಟು ತುಲಾಭಾರ ಮಾಡಿ ದೇವಿಗೆ ಬಳೆಗಳನ್ನು ಅರ್ಪಿಸಿದರು. ಒಂದು ಜಾತಿ, ಧರ್ಮಕ್ಕೆ ಈ ಕ್ಷೇತ್ರ ಸಿಮೀತವಾಗಿಲ್ಲ ಸರ್ವ ಧರ್ಮಿಯರು ಇಲ್ಲಿ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. 16 ವರ್ಷಗಳಿಂದ ಇಲ್ಲಿ ನಿತ್ಯ ಮೂರು ಹೊತ್ತು ಅನ್ನ ಸಂತರ್ಪಣೆ ಸಾಂಗವಾಗಿ ನಡೆಯುತ್ತದೆ. ರಾಜ್ಯ ಅಷ್ಟೆ ಅಲ್ಲದೆ ಅಕ್ಕಪಕ್ಕದ ರಾಜ್ಯಗಳ ಜನತೆಯು ಇಲ್ಲಿಗೆ ಆಗಮಿಸಿ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ.