ಉಜಿರೆ: “ಸುಮಾರು 400 ವರ್ಷಗಳ ಹಿಂದೆ ಸ್ಥಾಪನೆಯಾದ ವೇಣೂರು ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು 2024ರ ಫೆಬ್ರವರಿಯಲ್ಲಿ ನಡೆಯಲಿದೆ. 10 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಈ ಕಾರ್ಯಕ್ರಮದ ದಿನಾಂಕವನ್ನು ಚುನಾವಣೆ ಬಳಿಕ ನಿಗದಿಪಡಿಸಲಾಗುವುದು” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಬುಧವಾರ ಉಜಿರೆಯ ಶ್ರೀ ಸಿದ್ಧವನದಲ್ಲಿ ಜರುಗಿದ ಮಹಾಮಸ್ತಕಾಭಿಷೇಕದ ಪೂರ್ವ ತಯಾರಿ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
“ಧರ್ಮವನ್ನು ಅಂತರಂಗದಲ್ಲಿ ಧರಿಸಿ, ನಡವಳಿಕೆಯಲ್ಲಿ ಅಳವಡಿಸಿ ಅದರ ತತ್ವದಂತೆ ಮುನ್ನಡೆಯಬೇಕು. ಯುವ ಸಮಾಜಕ್ಕೆ ದೃಢ ನಂಬಿಕೆ ವಿಶ್ವಾಸಗಳನ್ನು ನೀಡಲು ಧರ್ಮದ ಅಭಿವೃದ್ಧಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಆಧುನಿಕ ಜಗತ್ತಿನಲ್ಲಿ ಪ್ರಪಂಚವು ಸಣ್ಣದಾಗಿ ವ್ಯವಸ್ಥೆಗಳು ತ್ವರಿತವಾಗಿ ಸಾಗುತ್ತವೆ.” ಎಂದು ಹೇಳಿದರು.
ಮೂಡುಬಿದಿರೆ ಜೈನಮಠದ ಮಹಾ ಸ್ವಾಮೀಜಿ ಡಾ.ಚಾರು ಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಾತನಾಡಿ “ಸವಿಸ್ತಾರವಾದ ಉದ್ದೇಶ, ಐಕ್ಯತೆಯೊಂದಿಗೆ ಸಮಾಜಮುಖಿಯಾಗಿ ಮಹಾಮಜ್ಜನ ನಡೆಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗುವುದು. ಅಹಿಂಸೆಯಿಂದ ಶಾಂತಿ, ತ್ಯಾಗದಿಂದ ಸುಖ, ಮಿತ್ರತ್ವದಿಂದ ನೆಮ್ಮದಿ ಎಂಬ ನೆಲೆಯಲ್ಲಿ ಧರ್ಮದ ವಿಸ್ತಾರ ಸಾರುವ ಈ ಕಾರ್ಯಕ್ರಮವು ಸಮಾಜಮುಖಿಯಾಗಿ ನೆರವೇರಲಿದೆ” ಎಂದು ಹೇಳಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ ಅಜಿಲ ಮಾತನಾಡಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು,ಇದು ಧರ್ಮದ ತತ್ವ,ಅಹಿಂಸೆ, ಸಹಬಾಳ್ವೆಯ ಇತಿಹಾಸವನ್ನು ಪ್ರಸ್ತುತಪಡಿಸಲು ವೇದಿಕೆಯಾಗಲಿದೆ. ರಾಜ್ಯಮಟ್ಟದ ಸಮಿತಿ ರಚಿಸಿ ಕಾರ್ಯಕ್ರಮಗಳ ರೂಪುರೇಷೆ ಸಿದ್ದಪ್ಪಡಿಸಲಾಗುವುದು” ಎಂದರು.
ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ವಂದಿಸಿದರು. ಉಪನ್ಯಾಸಕ
ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ.ಸೋಮಶೇಖರ ಶೆಟ್ಟಿ ಸಹಕರಿಸಿದರು.
ರಾತ್ರಿ ಮಹಾ ಮಜ್ಜನ ಕಾರ್ಯಕ್ರಮ. ಕರ್ನಾಟಕದ ಏಕಶಿಲಾ ವಿಗ್ರಹಗಳ ಪೈಕಿ ವೇಣೂರು ಬಾಹುಬಲಿ ಮೂರ್ತಿ 36 ಅಡಿ ಇದ್ದು ಎತ್ತರದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ.ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸುವ ಪರಂಪರೆ ಹೊಂದಿದ್ದು, 1956 ರಿಂದಲೂ ನಡೆಯುತ್ತಾ ಬಂದಿದೆ. ಹಿಂದಿನ ಮಹಾಮಸ್ತಕಾಭಿಷೇಕ 2012ರಲ್ಲಿ ನಡೆದಿತ್ತು.ಬಿಸಿಲಿನ ಕಾರಣ ಈ ಬಾರಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳನ್ನು ರಾತ್ರಿ ಹೊತ್ತು ನೆರವೇರಿಸಲು ನಿರ್ಣಯಿಸಲಾಗಿದೆ.