ಮೈಸೂರು: ಆಷಾಢಕ್ಕೆ ಚಾಮುಂಡಿಬೆಟ್ಟ ಸಜ್ಜಾಗಿದೆ.. ನಿಸರ್ಗವೇ ಹೇಳುವಂತೆ ಗಿಡಮರಗಳೆಲ್ಲವೂ ಚಿಗುರಿ ಹಸಿರಿನಿಂದ ಕಂಗೊಳಿಸುತ್ತಾ ಆಷಾಢದ ಕುಳಿರ್ ಗಾಳಿಯಲ್ಲಿ ತೇಲಾಡಲು, ಮಂಜಿನ ತೆರೆಯಲ್ಲಿ ಮೈಮರೆಯಲು ಕೈ ಬೀಸಿ ಕರೆಯುವಂತೆ ಭಾಸವಾಗುತ್ತದೆ.
ಆಷಾಢವೇ ಹಾಗೆ.. ಮೋಡ ಮುಸುಕಿದ ವಾತಾವರಣದಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಜಿಟಿಜಿಟಿ ಮಳೆಯಲ್ಲಿ ಬೀಸುವ ತಂಗಾಳಿಯಲ್ಲಿ ಮಿಂದೇಳುವುದೇ ಒಂದು ಸುಂದರ ಅನುಭವ. ಅದರಲ್ಲೂ ಈ ದಿನಗಳಲ್ಲಿ ಅದರಲ್ಲೂ ಮುಂಜಾನೆ ಚಾಮುಂಡಿಬೆಟ್ಟಕ್ಕೆ ತೆರಳಿದರೆ ಅದರ ಅನುಭವ ವರ್ಣಿಸಲಾಗದ್ದು.. ಬೆಟ್ಟದ ನಳನಳಿಸುವ ಸುಂದರ ನೋಟ ನಿಸರ್ಗ ಪ್ರೇಮಿಗಳನ್ನು ದೂರದಿಂದಲೇ ಕೈಬೀಸಿ ಕರೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ಇಡೀ ಬೆಟ್ಟವನ್ನೇ ಆವರಿಸುವ ಮಂಜು ಕುಳಿರ್ ಗಾಳಿಯಲ್ಲಿ ತೇಲಿಹೋಗುವ ದೃಶ್ಯಗಳು ಮೈಮನವನ್ನು ಪುಳಕಗೊಳಿಸುತ್ತವೆ.
ಆಷಾಢದ ವೇಳೆ ಇಡೀ ಬೆಟ್ಟ ಹಸಿರ ಸೀರೆಯುಟ್ಟು ನಿಂತ ಷೋಡಷಿಯಂತೆ ಕಾಣಿಸುತ್ತದೆ. ಆಷಾಢ ತಿಂಗಳ ಪೂರ್ತಿ ಭಕ್ತರು, ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬರುತ್ತಾರೆಯಾದರೂ ಶುಕ್ರವಾರದಂದು ಮಾತ್ರ ಜನಜಾತ್ರೆಯೇ ನೆರೆಯುತ್ತದೆ. ವಾಹನಗಳ ಮೂಲಕ ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವವರು ಒಂದು ಕಡೆಯಾದರೆ ಮತ್ತೊಂದು ಕಡೆ ಚಾಮುಂಡಿಬೆಟ್ಟದ ಮೂಲಕ ಮೆಟ್ಟಿಲುಗಳನ್ನು ಏರಿ ಚಾಮುಂಡಿಬೆಟ್ಟವನ್ನು ತಲುಪುತ್ತಾರೆ. ಹಿಂದಿನಿಂದಲೂ ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯನ್ನು ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಈ ಬಾರಿ,ಜೂ.23, 30, ಜು.7 ಹಾಗೂ ಜು.14ರಂದು ಆಷಾಢ ಶುಕ್ರವಾರ ಬರಲಿದ್ದು, ಜು.10ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ನಡೆಯಲಿದೆ. ಹೀಗಾಗಿ ಚಾಮುಂಡಿಬೆಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ಆಷಾಢ ಶುಕ್ರವಾರ ಹಾಗೂ ವರ್ಧಂತಿಯ ದಿನಗಳಂದು ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಅಲಂಕಾರ ಮಾಡಲಾಗುತ್ತದೆ. ಆಷಾಢ ಮಾಸದಲ್ಲಿ ಶಕ್ತಿ ದೇವತೆಯ ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ ಎಂದು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ.
ಈಗಾಗಲೇ ಪಾದದಿಂದ ಚಾಮುಂಡಿಬೆಟ್ಟದವರೆಗೆ ಮೆಟ್ಟಿಲುಗಳ ಎರಡು ಬದಿಯಲ್ಲಿ ಬೆಳೆದ ಕಾಡುಗಳನ್ನು ಕಡಿದು, ಭಕ್ತರಿಗೆ ಮೆಟ್ಟಿಲು ಹತ್ತಲು ಸುಗಮ ಮಾಡಿಕೊಡಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸುವುದರಿಂದ ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛತೆ ಕಾಪಾಡುವುದು ಬಹುಮುಖ್ಯವಾಗಿದೆ. ಹೀಗಾಗಿ ಮೈಸೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದಾರೆ.
ಬೆಟ್ಟದ ಪಾದದಿಂದ ದೇವಾಲಯದವರೆಗೂ ಮೆಟ್ಟಿಲುಗಳನ್ನು ಗುಡಿಸಿ, ಮುಳ್ಳಿನ ಗಿಡ ತೆರವುಗೊಳಿಸಿ, ಮಾರ್ಗ ಮಧ್ಯೆದಲ್ಲಿ ಬಿಸಾಡಿದ್ದ ನೀರಿನ ಬಾಟಲ್, ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡಲಾಗಿದೆ. ಇದರಿಂದ ಮೆಟ್ಟಿಲು ಮೂಲಕ ಸಾಗುವ ಭಕ್ತರಿಗೆ ಅನುಕೂಲವಾಗಲಿದೆ.
ಇನ್ನೊಂದೆಡೆ ಚಾಮುಂಡಿಬೆಟ್ಟದಲ್ಲಿ ಆಷಾಢದ ಶುಕ್ರವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡುವ ಕಾರ್ಯಗಳು ಆರಂಭವಾಗಿವೆ. ಒಟ್ಟಾರೆ ಆಷಾಢಕ್ಕೆ ಚಾಮುಂಡಿಬೆಟ್ಟ ಸರ್ವ ರೀತಿಯಲ್ಲೂ ಸಜ್ಜಾಗುತ್ತಿರುವುದಂತು ನಿಜ.
ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…
ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.