ಚಿಕ್ಕಮಗಳೂರು: ಮುಸಲ್ಮಾನ್ ಬಾಂಧವರಿಗೆ ಒಂದು ತಿಂಗಳ ಕಾಲ ನಡೆಯುವ ಪವಿತ್ರ ರಂಜಾನ್ ಮಾಸದ ಸಮಯದಲ್ಲಿ ಧ್ವನಿವರ್ಧಕದ ಮೂಲಕ ಆಝಾನ್ಗೆ ಅವಕಾಶ ಮಾಡಿಕೊಡಬೇಕು ಎಂದು ಸಿ.ಎನ್.ಅಕ್ಮಲ್ ಎಜುಕೇಷನ್ ಟ್ರಸ್ಟ್ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದ ಸಮುದಾಯದ ಮುಖಂಡರುಗಳು ರಂಜಾನ್ ಸಮಯದಲ್ಲಿ ಧ್ವನಿವರ್ಧಕದ ಮೂಲಕ ಆಝಾನ್ಗೆ ಅವಕಾಶ ಮಾಡಿಕೊಟ್ಟು ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ಸಿ.ಎನ್.ಅಕ್ಮಲ್ ಮುಸಲ್ಮಾನ್ ಬಾಂಧವರಿಗೆ ರಂಜಾನ್ ಬಹಳ ಪವಿತ್ರ ಮಾಸವಾಗಿರುತ್ತದೆ. ಶಾಂತಿ, ಸಹಬಾಳ್ವೆ, ದಾನ, ಧರ್ಮ ಉಪವಾಸದೊಂದಿಗೆ ಕಟ್ಟುನಿಟ್ಟಾಗಿ ಆಝಾನ್ ಕೂಡ ರಂಜಾನ್ ಆಚರಣೆಯ ಒಂದು ಭಾಗವಾಗಿರುತ್ತದೆ ಎಂದರು.
ಇಂತಹ ಸಂದರ್ಭದಲ್ಲಿ ರಂಜಾನ್ ಉಪವಾಸ ನಡೆಯುವ ಒಂದು ತಿಂಗಳ ಬೆಳಗಿನ ಜಾವ ೫ ರಿಂದ ೫.೩೦ ರೊಳಗೆ ಧ್ವನಿವರ್ಧಕದ ಮೂಲಕ ಆಝಾನ್ ಅವಕಾಶ ಮಾಡಿಕೊಟ್ಟು ಪವಿತ್ರ ರಂಜಾನ್ ಆಚರಿಸಲು ಮುಸ್ಲೀಂ ಬಾಂಧವರಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮಾಸದ ವಿಶೇಷ ಸಂದರ್ಭಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ಕ್ರೀಡಾಕೂಟಗಳಿಗೆ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಧ್ವನಿವರ್ಧಕವನ್ನು ಬಳಸಲು ಅವಕಶ್ಯತೆಯಿರುವ ಹಿನ್ನೆಲೆಯಲ್ಲಿ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಕೆಂಪನಹಳ್ಳಿ ರಸೂಲ್ಖಾನ್, ಇರ್ಫಾನ್, ಸೈಯದ್ ಜಬಿ, ಅಜ್ಮಲ್ ಬೇಗ್ ಹಾಜರಿದ್ದರು.