ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಬಿಸಿಲದಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಣ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ.ಈ ನಡುವೆ ಶಾಖಾಘಾತದ ಭೀತಿ ನಗರಕ್ಕೆ ಎದುರಾಗಿದೆ.
ಉರಿ ಸೆಕೆಗೆ ಬೆವೆತು ಹೋಗಿದ್ದಾರೆ. ಈ ನಡುವೆ ಶಾಖಾಘಾತದ ಭೀತಿ ಎದುರಾಗಿದೆ.. ವೈದ್ಯರು ಎಚ್ಚರಿಕೆಯಿಂದ ಇರಿ ಅಂತ ಸೂಚನೆ ನೀಡಿದ್ದಾರೆ.
ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ರಿಂದ 6.4ರಷ್ಟು ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ಇದರಿಂದ ಕೈಕಾಲುಗಳಲ್ಲಿ ಊತ, ಮೈಮೇಲೆ ಬೆವರುಸಾಲೆ ಮೂಡುವುದು, ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ. ಇದು ಎದೆಯಲ್ಲಿ ಸೆಳೆತ ಉಂಟು ಮಾಡುವ ಸಾಧ್ಯತೆಯಿದೆ. ಪರಿಣಾಮ ಹೃದಯಾಘಾತ ಸಂಭವಿಸಬಹುದು. ತಲೆಸುತ್ತುವಿಕೆ ಉಂಟಾಗಬಹುದು. ಅಲ್ಲದೆ ಶಾಖಾಘಾತ ಹೆಚ್ಚಾಗಿ ಮರಣ ಸಂಭವಿಸುವ ಸಾಧ್ಯತೆಯಿದೆ.
ಮಕ್ಕಳು, ವೃದ್ಧರು, ಗರ್ಭಿಣಿಯರು, ಮಾನಸಿಕ ಸ್ಥಿಮಿತ ಕಳೆದುಕೊಂಡವರು, ವಿವಿಧ ರೋಗಗಳಿಂದ ಬಳಲುತ್ತಿರುವವರು ಶಾಖಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಶಾಖಾಘಾತಕ್ಕೆ ಒಳಗಾದವರ ಮಾನಸಿಕ ಸ್ಥಿಮಿತ ಏರುಪೇರಾಗಬಹುದು. ದೇಹದ ಉಷ್ಣತೆ 40° ಗಿಂತಲೂ ಹೆಚ್ಚಾಗಬಹುದು. ಹೀಗಾದಾಗ ವಿಪರೀತ ಜ್ವರ ಬಂದಾಗ ವ್ಯಕ್ತಿಯೋರ್ವನು ಯಾವ ರೀತಿ ವರ್ತಿಸುತ್ತಾನೋ ಆ ರೀತಿ ವರ್ತಿಸಬಹುದು. ಪ್ರಜ್ಞೆ ಕಳೆಯಬಹುದು, ಈ ವೇಳೆ ಸೂಕ್ತ ಚಿಕಿತ್ಸೆ ಸಿಕ್ಕದಿದ್ದಲ್ಲಿ ಜೀವಹಾನಿಯೂ ಆಗಬಹುದು. ಸದ್ಯ ಮಂಗಳೂರಿನಲ್ಲಿ ಬಿಸಿಲ ದಗೆ ಹೆಚ್ಚಾಗಿರುದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಕರಾವಳಿಯಲ್ಲಿ ತಗಡು ಶೀಟು ಅಳವಡಿಸಿರುವ ಮುಚ್ಚಿದ ಕೋಣೆಯಲ್ಲಿ ಇರುವವರು, ಸರಿಯಾಗಿ ಗಾಳಿ ಆಡದಂತಹ ಜಾಗಗಳಲ್ಲಿ ವಾಸಿಸುವವರು, ಫ್ಯಾಕ್ಟರಿಗಳಲ್ಲಿ, ಕಲ್ಲು ಕೋರೆಗಳಲ್ಲಿ ಕೆಲಸ ಮಾಡುವವರು ಬಹಳ ಜಾಗರೂಕರಾಗಿರುವ ಅವಶ್ಯಕತೆ ಇದೆ. ಜೊತೆಗೆ ಅನಗತ್ಯ ಬಿಸಿಲಿನಲ್ಲಿ ಓಡಾಟ ನಿಲ್ಲಿಸಿ ಅಂತ ಆರೋಗ್ಯ ಇಲಾಖೆ ಎಚ್ಚರಿಸಿದೆ.