ಧಾರವಾಡ : ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಸಹಿ ಹಾಕುವ ಮೂಲಕ ಸಹಿ ಆಂದೋಲನಕ್ಕೆ ಚಾಲನೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇಲಾಖೆಗಳ ಸಹಭಾಗಿತ್ವದಲ್ಲಿ ತಂಬಾಕು ರಹಿತ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಯ ಸಭಾಂಗಣದಲ್ಲಿ ಈ ವರ್ಷದ ಘೋಷ ವಾಕ್ಯ: ನಮಗೆ ಆಹಾರ ಬೇಕು, ತಂಬಾಕಲ್ಲ ಎಂಬ ಧ್ಯೇಯದೊಂದಿಗೆ ಉಪನ್ಯಾಸ ಕಾರ್ಯಕ್ರಮ, ತಂಬಾಕು ಮುಕ್ತ 100 ಶಾಲೆಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ವಿತರಣೆ ಹಾಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಕಾನೂಟಿu ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಎಫ್. ದೊಡ್ಡಮನಿ ಅವರು ಮಾತನಾಡಿ ತಂಬಾಕಿನ ದುಶ್ಚಟದಿಂದ ಎಲ್ಲರೂ ದೂರವಾಗಲು ಧೃಡ ನಿಶ್ಚಯವನ್ನು ಮಾಡಿ ಮತ್ತು ಉತ್ತಮ ಆಹಾರ ಸೇವೆನೆಯ ಮೂಲಕ ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿ ಪಾಟೀಲ ಅವರು ಸದೃಡ ಭಾರತ ನಿರ್ಮಾಣಕ್ಕಾಗಿ ಸದೃಡ ಯುವಶಕ್ತಿಯ ಅವಶ್ಯವಿದ್ದು ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಈ ದುಶ್ಚಟಕ್ಕೆ ಬಲಿಯಾಗದಂತೆ ಅವರಿಗೆ ತಿಳವಳಿಕೆಯನ್ನು ನೀಡಲು ತಿಳಿಸಿದರು. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಲು ಕೋರಿದರು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅವರು ಎಲ್ಲ ಶಿಕ್ಷಕರಿಗೆ ತಮ್ಮ ಎಲ್ಲ ವಿದ್ಯಾರ್ಥಿಗಳಿಗೆ ತಂಬಾಕಿನ ದುಷ್ಪರಿಣಾಮಗಳ ಕುರಿತಂತೆ ತಿಳಿಸಬೇಕು ಹಾಗೂ ಅವರು ಈ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳಲು ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಕೋಶಕ್ಕೆ ಕೈಜೋಡಿಸಲು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವೀಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಚಟುವಟಿಕೆಗಳನ್ನು ವಿವರಿಸಿದರು. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಿ ಸಹಿ ಆಂದಲೋನಕ್ಕೆ ಸಹಿ ಹಾಕುವ ಮುಖಾಂತರ ಸಹಕರಿಸಬೇಕೆಂದು ಕೋರಿದರು.
ಉಪನ್ಯಾಸಕರಾಗಿ ಆಗಮಿಸಿದ ಡಾ. ಉಮೇಶ ಎಚ್.ಎಮ್. ಎನ್ಓಹೆಚ್ಪಿ ಕಾರ್ಯಕ್ರಮಾಧಿಕಾರಿಗಳು ಮತ್ತು ದಂತ ವೈದ್ಯಾಧಿಕಾರಿಗಳು ಇವರು ತಂಬಾಕು ಮತ್ತು ಅದರಿಂದಾಗುವ ದುಷ್ಟಪರಿಣಾಮಗಳ ಕುರಿತಂತೆ ಉಪನ್ಯಾಸವನ್ನು ನೀಡಿದರು. ಹಾಗೂ ಈ ದುಶ್ಚಟದಿಂದ ಪಾರಾಗಲು ಉಚಿತ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಯು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ವ್ಯಸನ ಮುಕ್ತ ಕೇಂದ್ರದಲ್ಲಿ ಲಭ್ಯವಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಲು ತಿಳಿಸಿದರು. ಶಾಲಾ ಶಿಕ್ಷಕ, ಶಿಕ್ಷಕಿಯರಿಗೆ ಈ ದುಶ್ಚಟಕ್ಕೆ ಬಲಿಯಾಗಿದ್ದ ವಿದ್ಯಾರ್ಥಿಗಳಿದ್ದಲ್ಲಿ ಅವರನ್ನು ತಂಬಾಕು ವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಲು ಸೂಚಿಸಿದರು.
ನಂತರ ಚಿತ್ರಕಲಾ ಸ್ಪರ್ದೆ ಮತ್ತು ಪ್ರಬಂಧ ಸ್ಪರ್ದೆ ಏರ್ಪಡಿಸಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತಂತೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ತಂಬಾಕು ಮುಕ್ತ ಸಮಾಜಕ್ಕಾಗಿ ತಾವು ಕಾರ್ಯಕ್ರಮದ ಜೊತೆಗೆ ಕೈ ಜೋಡಿಸುವುದಾಗಿ ತಿಳಿಸಿದರು.
ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿನಯ ನಗರ, ಧಾರವಾಡ ಶಾಲೆಯ ಶಿಕ್ಷಕಿ ಸಾವಿತ್ರಿ ಪಟಗಾರ ಅವರು ಇದು ತುಂಬಾ ಉತ್ತಮ ಕಾರ್ಯಕ್ರಮವಾಗಿದ್ದು ತಾವು ಕೂಡಾ ಕಾರ್ಯಕ್ರಮದೊಂದಿಗೆ ಕೈ ಜೋಡಿಸುತ್ತೇನೆಂದು ತಿಳಿಸಿದರು ಮತ್ತು ಕಾರ್ಯಕ್ರಮದ ಸಿಬ್ಬಂದಿಗಳ ಕರ್ತವ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ತಂಬಾಕು ವ್ಯಸನದಿಂದ ಮುಕ್ತರಾದಂತಹ ಆಲಿಯಾ ಮಕಾಂದರ ಇವರನ್ನು ಸನ್ಮಾನಿಸಲಾಯಿತು ಹಾಗೂ ಸನ್ಮಾನಿತರು ಈ ದುಶ್ಚಟದಿಂದ ಪಾರಾಗಲು ಸಹಾಯ ಮಾಡಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತಾ ನನ್ನ ಸುತ್ತಮುತ್ತಲಿನ ಜನರಿಗೂ ಕೂಡ ಈ ದುಶ್ಚಟದಿಂದ ದೂರವಿರಲು ತಿಳಿಸಿದರು.
ಬಿ. ಆರ್. ಪಾತ್ರೋಟ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಧಾರವಾಡ ತಾಲೂಕಾ ಆರೋಗ್ಯಾಧಿಕಾರಿಗಳು ಮತ್ತು ಧಾರವಾಡ ನಗರ ಆಶಾ ಕಾರ್ಯಕರ್ತೆಯರು, ವಿವಿಧ ಶಾಲಾ, ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.