News Karnataka Kannada
Monday, April 29 2024
ಆರೋಗ್ಯ

ಮನುಷ್ಯನ ಜ್ಞಾನ ವರ್ಧಕಕ್ಕೆ ಒಂದೆಲಗ ರಾಮಬಾಣ

A panacea for the enhancement of man's knowledge
Photo Credit : By Author

ಒಂದೆಲಗ ಸೇವಿಸಿದರೆ ಜ್ಞಾನ ಹೆಚ್ಚುತ್ತದೆ ಎನ್ನುವುದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಮಾತಾಗಿದೆ. ಈ ಸಸ್ಯ  ಅಪರಿಚಿತವೇನಲ್ಲ.  ಸಾಮಾನ್ಯವಾಗಿ ಮಲೆನಾಡಿನ ಗದ್ದೆಯ ಬದುಗಳಲ್ಲಿ, ಬಯಲಿನಲ್ಲಿ ಹೀಗೆ ಎಲ್ಲೆಂದರಲ್ಲಿ ನೀರಿನಾಸರೆಯಿರುವ ಸ್ಥಳಗಳಲ್ಲಿ ಹರಡಿ ಬೆಳೆಯುತ್ತದೆ.. ಪಟ್ಟಣಗಳಲ್ಲಿ ಇತರೆ ಸೊಪ್ಪುಗಳೊಂದಿಗೆ  ಇದರ ಮಾರಾಟವೂ ನಡೆಯುತ್ತದೆ.

ಉರುಟು ಎಲೆಗಳನ್ನೊಳಗೊಂಡ ಗೊಂಚಲು, ಗೊಂಚಲಾಗಿ, ಗಂಟು ಬಳ್ಳಿಗಳಾಗಿ ನೆಲದಲ್ಲಿ ಸಮನಾಂತರವಾಗಿ ಹರಡಿಕೊಂಡು ಬೆಳೆಯುವ ಇದು  ಹುಲ್ಲು ವರ್ಗಕ್ಕೆ ಸೇರಿದ ಒಂದೆಲಗವನ್ನು ತಿಮರೆ,   ಸರಸ್ವತಿ ಎಲೆ, ವಲ್ಲಾಡಿ, ಏಕಪಾನಿ, ನುಂಡೂಕ, ಪರ್ಣಿ, ಉರಗೆ, ಬ್ರಾಹ್ಮಿ  ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿದೆ.

ಒಂದೆಲಗವು  ಬುದ್ದಿ ವರ್ಧನಕ್ಕೆ ಅತ್ಯಮೂಲ್ಯ ಗಿಡಮೂಲಿಕೆಯಾದುದರಿಂದ ಜ್ಞಾನದ ಅಧಿದೇವತೆ ಸರಸ್ವತಿಯ ಹೆಸರಾದ  ’ಬ್ರಾಹ್ಮಿ’ ಎಂಬ ಹೆಸರು  ಬಂದಿದೆ.   ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆಯದಿದ್ದರೂ ಹಳ್ಳಿಯಲ್ಲಿನ ಜನರ ನಿತ್ಯದ ಪದಾರ್ಥಗಳಲ್ಲಿ ತರಕಾರಿಯಾಗಿ ಬಳಕೆಯಾಗುತ್ತಿರುವುದು ಕಂಡು  ಬರುತ್ತದೆ.  ದಿನನಿತ್ಯ  ಮಾನವನ ನಿರ್ಲಕ್ಷ್ಯಕ್ಕೆ  ಒಳಗಾಗಿ ದೂರವಾಗಿಯೇ ಉಳಿದಿರುವ ಒಂದೆಲಗದ ಉಪಯೋಗವನ್ನು ಅರಿತವರು ವಿರಳವೇ ಎನ್ನಬೇಕು.

ಇದು ಹಲವು ರೋಗಗಳಿಗೆ  ಸಿದ್ದೌಷಧವಾಗಿದೆ ಎಂದರೆ ಅಚ್ಚರಿಯಾಗದಿರದು. ಮಾನವನಲ್ಲಿ ಮುಖ್ಯವಾಗಿ ಮೆದುಳಿನ ವಿಕಾರಕ್ಕೆ ಸಂಬಂಧಿಸಿದಂತಹ ರೋಗಗಳಾದ ಮೂರ್ಛೆ, ಮನಸ್ಸಿನ ಅಸ್ಥಿರತೆ, ಸ್ಮರಣ ಶಕ್ತಿಯ ನಾಶ ಹಾಗೂ  ಮಾನಸಿಕ  ಮುಂತಾದ ರೋಗಗಳನ್ನು ಗುಣಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.

 ಇದರ ಎಲೆಯಲ್ಲಿ ಒಂದು ರೀತಿಯ ಎಣ್ಣೆಯಂತಹ ಸತ್ವವಿರುವುದರಿಂದ ಎಲೆಯನ್ನು ಬಿಸಿಲಿನಲ್ಲಿ ಒಣಗಿಸದೆ ನೆರಳಿನಲ್ಲಿಯೇ ಒಣಗಿಸಿ (ಬಿಸಿಲಿನಲ್ಲಿ ಒಣಗಿಸಿದ್ದೇ ಆದರೆ ಶಾಖಕ್ಕೆ ಎಲೆಯಲ್ಲಿನ ಎಣ್ಣೆಯಂತಹ ಸತ್ವವು ಆರಿಹೋಗುವುದು) ನಂತರ ಕುಟ್ಟಿ ಪುಡಿಮಾಡಿ ಚೂರ್ಣ ರೂಪದಲ್ಲಿ ಉಪಯೋಗಿಸಬೇಕು. ಹೀಗೆ ಉಪಯೋಗಿಸಿದ್ದೇ ಆದಲ್ಲಿ ದಮ್ಮು, ಕಫ ಮುಂತಾದ ಕಾಯಿಲೆಗಳು ವಾಸಿಯಾಗುವುವು. ಮೇಹದ ಹುಣ್ಣು, ಗಂಡಮಾಲೆ, ಕುಷ್ಠರೋಗಗಳ ಮೇಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಾತ್ರಿ ವೇಳೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ನೀರಿನೊಳಗೆ ಎಲೆಯನ್ನು ಅದ್ದಿ ಮುಂಜಾನೆ  ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಸ್ವರವನ್ನು ಸುಗಮಗೊಳಿಸುವಲ್ಲಿಯೂ ಇದು ಮಹತ್ವದ ಪಾತ್ರವಹಿಸುತ್ತದೆ.

ರಕ್ತವಿಕಾರಕ್ಕೂ ಒಂದೆಲಗವನ್ನು ಉಪಯೋಗಿಸುವುದಲ್ಲದೆ, ಕುರುಹುಗಳ ಅಕ್ರಮಕ್ಕೂ ಮಕ್ಕಳ ಜ್ವರಕ್ಕೂ ಸಹ ಇದು  ಔಷಧಿಯಾಗಿದೆ. ಪೆಟ್ಟು ತಾಗಿದ ಜಾಗದಲ್ಲಿ ಎಲೆಗಳನ್ನಿಟ್ಟರೆ ಉರಿಯಾಗದಂತೆ ತಡೆಯುತ್ತದೆ. ಜೇನಿಗೆ ಸಮ ಪ್ರಮಾಣದಲ್ಲಿ ರಸ ಸೇರಿಸಿ ದಿನಿತ್ಯ ಉಪಯೋಗಿಸಿದ್ದೇ ಆದರೆ ಮೂರ್ಛೆರೋಗವು ವಾಸಿಯಾಗುತ್ತದೆ  ಎಂದು ಹೇಳಲಾಗಿದೆ.  ಸಿದ್ಧಗೊಳಿಸಿದ  ಸಾರಸ್ವತ ಚೂರ್ಣದ ಸೇವನೆಯಿಂದ   ಬುದ್ದಿಶಕ್ತಿ   ಹಾಗೂ   ಸ್ಮರಣಶಕ್ತಿಗಳು ವೃದ್ಧಿಯಾಗುವುವು.

ಒಂದೆಲಗದಲ್ಲಿ ಚರ್ಮ, ಕೂದಲು, ಉಗುರುಗಳನ್ನು ಬೆಳೆಸುವ ಶಕ್ತಿಯಿರುವುದಾಗಿ ಪ್ರಾಣಿಗಳ ಮೇಲೆ ನಡೆಸಿದ ಪರೀಕ್ಷೆಗಳಿಂದ ತಿಳಿದು ಬಂದಿದೆ. ಕಹಿ  ವಗರು,  ಗುಣಗಳು ಹೇರಳವಾಗಿ ಇರುವುದರಿಂದ ಅಗ್ನಿವರ್ಧಕವೂ, ಕ್ರಿಮಿನಾಶಕವೂ ಆಗಿದೆ. ಉಪ್ಪು ಬೆಣ್ಣೆಯೊಂದಿಗೆ  ಅರೆದು ಗಾಯಗಳ ಮೇಲೆ ಲೇಪಿಸಿದ್ದಲ್ಲಿ ಗಾಯ ಶೀಘ್ರವೇ ಗುಣಮುಖವಾಗುವುದು.

ಹಿತ್ತಲಗಿಡ ಮದ್ದಲ್ಲ ಎಂಬ ಮಾತಿನಂತೆ ತಮ್ಮ ಕಾಲಬುಡದಲ್ಲಿಯೇ ಇದ್ದರೂ ಅದರ ಉಪಯೋಗ ಪಡೆಯದವರು ಇನ್ನಾದರೂ ಇದನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು