ಮೇ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ತಂಬಾಕು ಬಳಕೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದ್ದರೂ ಬೇರೆ ಬೇರೆ ರೀತಿಯಲ್ಲಿ ದಾಸರಾಗಿ ಕ್ಯಾನ್ಸರ್, ಕ್ಷಯ ಮುಂತಾದ ರೋಗಗಳನ್ನು ಆಹ್ವಾನ ಮಾಡಿಕೊಳ್ಳುತ್ತಿದ್ದೇವೆ.
ಇವತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿ ಎಲೆ ಅಡಿಕೆಯೊಂದಿಗೆ ತಂಬಾಕು ಸೇರಿಸಿ ಸೇವಿಸುವುದು, ನಶ್ಯ, ಬೀಡಿ, ಸಿಗರೇಟ್ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಜನ ತಂಬಾಕು ಸೇವನೆ ಮಾಡುತ್ತಲೇ ಇದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಯುವಕರು ಮಾತ್ರವಲ್ಲದೆ, ಯುವತಿಯರು ಸಿಗರೇಟ್ ಸೇವನೆ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ತಮಾಷೆಗೆ, ಖುಷಿಗೆ ಹೀಗೆ ಒಂದೊಂದು ಕಾರಣಕ್ಕೆ ಆರಂಭವಾಗುವ ಸಿಗರೇಟಿನ ಚಟ ಬಳಿಕ ಯಾರು ಇರಲಿ ಇಲ್ಲದಿರಲಿ ಸೇದುವುದು ಚಟವಾಗಿ ಬಿಡುತ್ತದೆ.
ಸಿಗರೇಟ್, ಬೀಡಿ ಸೇದುವುದರಿಂದ ಕೆಮ್ಮು, ಅಸ್ತಮಾ ಹೆಚ್ಚಾಗಿ ಆರೋಗ್ಯ ಕ್ಷೀಣಗೊಂಡು ಕ್ಯಾನ್ಸರ್ ಕ್ಷಯ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಇಷ್ಟಕ್ಕೂ ಸಿಗರೇಟ್ ಸೇದಿದರೆ ಅದರಿಂದ ಏನೋ ಒಂದು ಮಜಾ ಸಿಗುತ್ತೆ ಎಂಬ ಭ್ರಮೆಯಲ್ಲಿ ಕೆಲವರು ಇರುತ್ತಾರೆ. ಇದಕ್ಕೆ ಸಿಗರೇಟಿನಲ್ಲಿರುವ ನಿಕೋಟಿನ್ ಕಾರಣವಂತೆ ಇದು ಸಿಗರೇಟ್ನ್ನು ಮತ್ತೆ ಮತ್ತೆ ಸೇದುವಂತೆ ಮಾಡುತ್ತದೆ. ಇದರಿಂದ ಮುಂದೆ ಉಸಿರಾಟಕ್ಕೆ ಅಡಚಣೆ, ಕೆಮ್ಮು, ಕಫ, ಶ್ವಾಸಕೋಸದ ತೊಂದರೆ, ಕ್ಯಾನ್ಸರ್, ದೈಹಿಕ ಅಸಮರ್ಥತೆ ಹೀಗೆ ಹತ್ತು ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತದೆ.
ಆರೋಗ್ಯವಿದ್ದಾಗ ಸಿಗರೇಟ್ ಸೇದುವುದರಿಂದಾಗುವ ಪರಿಣಾಮಗಳು ಗೊತ್ತಾಗುವುದಿಲ್ಲ ಒಮ್ಮೆ ಆರೋಗ್ಯ ತಪ್ಪಿದಾಗ ಸಿಗರೇಟ್ನ ಚಮತ್ಕಾರ ಗೊತ್ತಾಗಿ ಬಿಡುತ್ತದೆ. ಕಾಯಿಲೆಯಲ್ಲಿ ಅದರ ಪಾತ್ರ ಎಷ್ಟಿದೆ ಎಂಬುದು ಅರಿವಿಗೆ ಬರುತ್ತದೆ. ಅದರಿಂದ ಹೇಗೋ ಬಿಡುಗಡೆಗೊಂಡು ಇನ್ನುಮುಂದೆ ಸಿಗರೇಟ್ ಸಹವಾಸ ಬೇಡಪ್ಪಾ ಎಂದು ದುಶ್ಚಟ ಬಿಟ್ಟವರು ಬದುಕಿಕೊಳ್ಳಬಲ್ಲರು.
ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಇವತ್ತಿನ ದಿನಗಳಲ್ಲಿ ಬೀಡಿ ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ. ದುಶ್ಚಟಗಳನ್ನು ಕಲಿಯುವುದು ಸುಲಭ ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ. ಬಹಳಷ್ಟು ಮಂದಿ ಇವತ್ತು ಧೂಮಪಾನ ಸೇವನೆ ಬಿಟ್ಟು ಉತ್ತಮ ಆರೋಗ್ಯ ಕಂಡು ಕೊಂಡಿದ್ದಾರೆ.
ಸಿಗರೇಟ್ ಸೇವನೆ ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಗಮನಿಸಿದ್ದಾರಂತೆ ಅಲ್ಲದೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಒಂದು ವಾರದಷ್ಟು ಸಮಯ ಧೂಮಪಾನ ಮಾಡದೆ ಇದ್ದವರಲ್ಲಿ ಶೇ.2.8 ರಷ್ಟು ರಕ್ತ ಪ್ರಸಾರದ ವ್ಯವಸ್ಥೆ ಸುಗಮವಾಗಿರುತ್ತಂತೆ. ವಿಟಮಿನ್ ’ಇ’ ಯನ್ನು ಗಾಮ ಟೋಕೋಫೆರಾಲ್ ರೂಪದಲ್ಲಿ ಸೇವಿಸಿದರಲ್ಲಿ ಶೇ. 1.5 ರಷ್ಟು ವೃದ್ಧಿ ಕಂಡು ಬಂದ ಸಂಗತಿಯನ್ನು ವಿಜ್ಞಾನಿಗಳು ಹೇಳಿದ್ದಾರೆ.
ದುಶ್ಚಟಗಳಿಂದ ಮುಕ್ತಿ ಹೊಂದಬೇಕಾದರೆ ಬೇರೆಯವರ ಸಲಹೆಗಳೊಂದಿಗೆ ತಾನು ಬಿಟ್ಟೇ ಬಿಡುತ್ತೇನೆ ಎಂಬ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು ಆಗ ಮಾತ್ರ ಸಾಧ್ಯ. ಇಷ್ಟಕ್ಕೂ ದೃಢಮನಸ್ಸಿದ್ದರೆ ಯಾವುದೂ ಕಷ್ಟವಲ್ಲ. ವಿಶ್ವತಂಬಾಕು ರಹಿತ ದಿನದ ವೇಳೆ ಸಂಕಲ್ಪಮಾಡಿ ಸಿಗರೇಟ್ ಬಿಟ್ಟಿದ್ದೇ ಆದರೆ ಆಚರಣೆಗೆ ಅರ್ಥ ಬರುತ್ತದೆ. ಜತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ.