ಗುಂಡ್ಲುಪೇಟೆ: ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದು, ಮೂವರಿಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ಪಟ್ಟಣದ ಹೊರ ವಲಯದ ಮಿಸ್ಟ್ರೀ ರಾಕ್ ಹೋಟೆಲ್ ಬಳಿ ನಡೆದಿದೆ.
ಕೇರಳ ಮೂಲದ ಅನಿಸ್ ಮೃತ ವ್ಯಕ್ತಿಯಾಗಿದ್ದು, ಚಾಲಕ ಸುನಿಲ್, ಮಹಿಳೆ ಅಮನ್ ಹಾಗು ಗಾಯತ್ರಿ(4) ಎಂಬ ಮಗುವಿಗೆ ತೀವ್ರತರವಾದ ಗಾಯಗಳಾಗಿದೆ. ಮಾಹಿತಿ ಅರಿತ 112 ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನೂ ಅನಿಸ್ ಮೃತದೇಹ ಕಾರಿನಲ್ಲಿ ಸಿಲುಕಿ ಹಾಕಿಕೊಂಡ ಹಿನ್ನೆಲೆ ಕ್ರೇನ್ ಹಾಗು ಸ್ಥಳೀಯರ ಸಹಾಯದಿಂದ ಹೊರ ತೆಗೆದು ಪಟ್ಟಣದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಗುಂಡ್ಲುಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಹಾಗು ಮೈಸೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಕಾರಿನ ನಡುವೆ ಮಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತಕ್ಕೆ ಕಾರು ಚಾಲಕನೇ ಅತೀ ವೇಗ ಹಾಗು ಅಜಾಗರೂಕ ಚಾಲನೆಯೇ ಕಾರಣ ಎನ್ನಲಾಗುತ್ತಿದೆ.
ಘಟನೆ ಸಂಬಂಧ ಗುಂಡ್ಲುಪೇಟೆ ಠಾಣೆ ಪೊಲೀಸರು ಲಾರಿ ಹಾಗೂ ಕಾರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.